Thursday, November 14, 2013

ಹತ್ತು ನಿಮಿಷ ಸಮಯವಿದೆಯೇ ?

                     ನನಗೆ ಕಸಿವಿಸಿಯಾಗುವುದೆಂದರೆ ಏಕೆ ನಮ್ಮ ಮಾಧ್ಯಮಗಳು ಸದಾ ನಕಾರಾತ್ಮಕ ಪ್ರಸಂಗಗಳಿಗೆ ಭಾರಿ ಪ್ರಚಾರ ನೀಡುತ್ತವೆ. ನಮ್ಮದೇ ಸಾಮರ್ಥ್ಯವನ್ನು ಗುರುತಿಸಲು ಏಕೆ ಹಿಂದೇಟು ಹಾಕುತ್ತೇವೆ? ಎಂಥ ಹೆಮ್ಮೆ ಪಡುವ ದೇಶ ನಮ್ಮದು. ಎಷ್ಟೋ ಕ್ಷೇತ್ರಗಳಲ್ಲಿ ಅಬ್ಬಬ್ಬಾ ಎನ್ನಿಸುವಷ್ಟು ಪ್ರಗತಿ ಸಾಧಿಸಿದ್ದೇವೆ. ಆದರೆ ಅದನ್ನೆಲ್ಲ ಗುರುತಿಸಲು ಅದೇನೋ ಹಿಂಜರಿಕೆ. ಅದೇನೋ ಆಲಸ್ಯ. ಏಕೆ ಇಂಥ ಮನೋಭಾವ?ಹಾಲು ಉತ್ಪಾದನೆಯಲ್ಲಿ ನಾವು ಜಗತ್ತಿನಲ್ಲೇ ಮೊದಲಿಗರು. ದೂರಸಂವೇದಿ ಉಪಗ್ರಹಗಳ ಯಶಸ್ವಿ ಉಡಾವಣೆಯಲ್ಲಿ ನಾವು ನಂಬರ್ ಒನ್. ಗೋಧಿ ಬೆಳೆಯಲ್ಲಿ ನಮ್ಮದು ಎರಡನೇ ಸ್ಥಾನ. ಭತ್ತದಲ್ಲೂ ಅಷ್ಟೇ ಎರಡನೆಯ ಸ್ಥಾನ ನಮ್ಮದು.
                    ಡಾ.ಸುದರ್ಶನ್ ಅವರ ಸಾಧನೆಯನ್ನೇ ನೋಡಿ. ಈ ಮನುಷ್ಯ ಬುಡಕಟ್ಟು ಗ್ರಾಮಗಳನ್ನು ಹೇಗೆ ಸ್ವಾವಲಂಬಿಯಾಗುವಂತೆ ಪರಿವರ್ತನೆ ಮಾಡಿದ್ದಾರೆ.
                    ಇಂಥ ಸಾಧನೆಗಳು ಲಕ್ಷಾಂತರವಿವೆ. ಆದರೆ ನಮ್ಮ ಮಾಧ್ಯಮಗಳಿಗೆ ನಮ್ಮ ವೈಫಲ್ಯಗಳನ್ನು ವೈಭವೀಕರಿಸುವ ಹುಚ್ಚು. ಒಮ್ಮೆ ಟೆಲ್ ಅವಿವ್‌ನಲ್ಲಿ ವೃತ್ತಪತ್ರಿಕೆ ಓದುತ್ತಿದ್ದೆ. ಹಿಂದಿನ ದಿನ ಭಾರಿ ಅನಾಹುತವಾಗಿತ್ತು. ಬಾಂಬ್ ದಾಳಿ ಆಗಿತ್ತು. ಸಾವು ನೋವಾಗಿತ್ತು. ಎಲ್ಲೆಲ್ಲೂ ಭಯದ ವಾತಾವರಣ. ಆದರೆ ಮರುದಿನದ ವೃತ್ತಪತ್ರಿಕೆಯಲ್ಲಿ ಒಂದು ಚಿತ್ರ ಮುದ್ರಣವಾಗಿತ್ತು. ಅದು ಒಬ್ಬ ಯಹೂದಿ ಸಂಭಾವಿತನದು. ಆತ ಇಡೀ ಆ ಬಣಗುಟ್ಟುವ ನೆಲವನ್ನು ನಂದನವನವನ್ನಾಗಿ ರೂಪಾಂತರಗೊಳಿಸಿದ್ದ. ಇಂಥ ಸುದ್ದಿ ಅಂಥ ಕ್ಷಣಗಳಲ್ಲಿ ಬದುಕಿಗೆ ಭರವಸೆ ಮೂಡಿಸುತ್ತಿತ್ತು. ಜೀವನಕ್ಕೆ ಬೇಕಾಗಿರುವುದು ಸಕಾರಾತ್ಮಕ ದೃಷ್ಟಿ. ಬಾಂಬ್ ದಾಳಿ, ಸಾವು ನೋವು ಇವೆಲ್ಲ ಸುದ್ದಿಯನ್ನು ಪ್ರಕಟಿಸಿತ್ತು ಆ ಪತ್ರಿಕೆ ನಿಜ. ಆದರೆ ಮುಖಪುಟದಲ್ಲಲ್ಲ. ದೊಡ್ಡ ಅಕ್ಷರಗಳಲ್ಲೂ ಅಲ್ಲ. ಒಳಪುಟದಲ್ಲಿ. ಅದನ್ನು ವೈಭವೀಕರಿಸುವ ಉತ್ಸಾಹವನ್ನು ಪತ್ರಿಕೆಗಳು ತೋರಲಿಲ್ಲ. ಅವೆಲ್ಲ ಒಳ್ಳೆ ಸುದ್ದಿಗಳ ಮಧ್ಯೆ ಹೂತುಹೋಗಿದ್ದವು. ನಮ್ಮಲ್ಲಿ ಪತ್ರಿಕೆಗಳಲ್ಲಿ ನಾವು ಬಹುತೇಕ ಓದುವುದೇ ಕೊಲೆ, ಸುಲಿಗೆ, ಅತ್ಯಾಚಾರ, ಭಯೋತ್ಪಾದನೆ ಇಂಥ ಸುದ್ದಿಗಳನ್ನು. ಏನಾಗಿದೆ ನಮಗೆ?

ಸಂಗ್ರಹ : ಭವ್ಯ ಭಾರತದ ಕನಸುಗಾರ ಅಬ್ದುಲ್ ಕಲಾಂ
ಲೇಖಕ : ಟಿ.ಆರ್.ಅನಂತರಾಮು
ಪ್ರಕಾಶನ : ಸಪ್ನ ಬುಕ್ ಹೌಸ್, ಬೆಂಗಳೂರು
ಬೆಲೆ : ರೂ.೧೨೦

No comments:

Post a Comment