Sunday, September 21, 2014

ಭೂತಾಯಿ

                      ದಿ.೨೧.೦೯.೨೦೧೪ರಂದು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನಲ್ಲಿ ಬಯಲು ಸಾಹಿತ್ಯ ವೇದಿಕೆ ಹಾಗೂ ಲೇಡೀಸ್ ಕ್ರಿಯೇಟಿವ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಶ್ರೀ.ಎನ್.ಎಂ.ಕೊಟ್ರೇಶ್ ಅವರ ಭೂತಾಯಿ, ಹಾಗೂ ಅಲೆಮಾರಿ ಎಂಬ ಕೃತಿಗಳು ಬಿಡುಗಡೆಯಾದವು. ಭೂತಾಯಿ ಕಾದಂಬರಿಯ ಕುರಿತು ಪುಸ್ತಕ ಪರಿಚಯವನ್ನು ನಾನು ಮಾಡಿದೆ. ಅದನ್ನೇ ಬ್ಲಾಗ್‌ನಲ್ಲಿ ಹಾಕಿರುವೆ. 

ಭೂತಾಯಿ
       ಓದುಗರಿಗೆ ಕಾದಂಬರಿ ಓದುವ ಹವ್ಯಾಸವನ್ನು ಆರಂಭಿಸಿದವರು ಮೊದಲಿಗೆ ಅ.ನ.ಕೃಷ್ಣರಾಯರು. ಅದುವರೆಗೆ ಕನ್ನಡಿಗರು ಕಾದಂಬರಿ ಓದುತ್ತಿರಲಿಲ್ಲವೆಂದಲ್ಲ, ಆದರೆ ಅದಕ್ಕೊಂದು ಓದುಗ ಸಮೂಹವನ್ನೇ ಸೃಷ್ಟಿಸಿದವರು ಅನಕೃ ಅವರು. ಹಾಗಾಗಿಯೇ ಅವರನ್ನು ಕಾದಂಬರಿ ಸಾರ್ವಭೌಮರೆಂದೇ ಗುರುತಿಸಲಾಗುತ್ತದೆ. ಅಂದಿನಿಂದ ಬೆಳೆದುಬಂದಿರುವ ಕಾದಂಬರಿಗಳ ಜಗತ್ತು ಈಗ ವಿಶಾಲವಾಗಿ ಬೆಳೆದುನಿಂತಿದೆ. ಕೆಲವು ಲೇಖಕರು ಕೆಲವು ಓದುಗರನ್ನು, ಕೆಲವು ಓದುಗರು ಕೆಲವು ಲೇಖರ ಕೃತಿಗಳನ್ನು ಮಾತ್ರ ಓದುವಷ್ಟರ ಮಟ್ಟಿಗೆ ಓದುಗ ಮತ್ತು ಲೇಖಕರ ಸಮೂಹ ಸೃಷ್ಟಿಯಾಗಿದೆ. 
         ಜಾಗತೀಕರಣದ ಇಂದಿನ ದಿನಗಳ ಭರಾಟೆಯಲ್ಲಿ ಕಾದಂಬರಿ ಓದುವ ಪ್ರತ್ಯೇಕ ಓದುಗರೇ ಇದ್ದಾರೆ. ಓದುಗನಿಗೆ ಸಂತಸ ನೀಡುವುದರೊಂದಿಗೇ ನೀತಿಯನ್ನು ತಿಳಿಸುವ, ರಸಾನುಭವ ಒದಗಿಸುವುದನ್ನು ಕಾದಂಬರಿಗಳು ಮಾಡುತ್ತವೆ. ಎಲೆಕ್ಟ್ರಾನಿಕ್ ಮಾಧ್ಯಮಗಳ ಭರಾಟೆಯಲ್ಲೂ ಪುಸ್ತಕ ಪ್ರೇಮಿಗಳು ಉಳಿದುಕೊಂಡಿರುವುದೇ ವಿಶೇಷ.
       ಹಿರಿಯರಾದ ಶ್ರೀ.ಎನ್.ಎಂ.ಕೊಟ್ರೇಶ್ ಅವರು ಈಗಾಗಲೇ ಹಲವಾರು ಕೃತಿಗಳಿಂದ, ಛಾಯಾಚಿತ್ರಗಳಿಂದ ನಾಡಿನಾದ್ಯಂತ ಪರಿಚಿತರು. ವ್ಯಕ್ತಿಯ ವ್ಯಕ್ತಿತ್ವವನ್ನು ಅವರ ಬರವಣಿಗೆಯಿಂದಲೂ ಗುರುತಿಸಬಹುದು. ಹತ್ತು ಹಲವು ದೇಶಗಳನ್ನು ಅವರು ಸುತ್ತಾಡಿದ್ದರೂ ಈ ನೆಲದ ಸೊಗಡು ಅವರನ್ನು ಬಿಟ್ಟಿಲ್ಲ. ಗ್ರಾಮೀಣ ಭಾಗದ ಬದುಕನ್ನೆ ಅವರು ತಮ್ಮ ಕಾದಂಬರಿಯ ಕಥಾವಸ್ತುವನ್ನಾಗಿ ಆಯ್ದುಕೊಂಡಿರುವುದು, ಗ್ರಾಮಗಳ ಬಗೆಗೆ ಅವರಿಗಿರುವ ಕಾಳಜಿಯನ್ನು ತೋರುತ್ತದೆ.
         ಪ್ರಸ್ತುತ ಭೂತಾಯಿ ಕಾದಂಬರಿ ಒಕ್ಕಲುತನದ ಒಬ್ಬ ಹೆಣ್ಣುಮಗಳ ಕಥಾನಕ ಎನ್ನುವುದಕ್ಕಿಂತ ವ್ಯವಸ್ಥೆಯ ವಿರುದ್ಧ, ಅನ್ಯಾಯದ ವಿರುದ್ಧ ಹೋರಾಟ ಮಾಡುವ ಹೋರಾಟಗಾರ್ತಿಯೊಬ್ಬಳ ಹೋರಾಟದ ಕತೆ ಎನ್ನಬಹುದು. ಇದು ಸತ್ಯಕತೆಯೆಂದೇ ಲೇಖಕರು ತಿಳಿಸಿರುವುದರಿಂದ ಈ ಕಾದಂಬರಿಯಲ್ಲಿ ಕಲ್ಪನೆ ಅಥವಾ ಫ್ಯಾಂಟಸಿ ಇಲ್ಲ. ಹಾಗೆಂದು ಕಾದಂಬರಿ ನೀರಸವಾಗಿಯೂ ಇಲ್ಲ. ಹಳ್ಳಿಗಾಡಿನ, ಬಡತನದ, ದುಡಿವ ವರ್ಗದ ವಾಸ್ತವ ಬದುಕಿನ ಚಿತ್ರಣ ಇಲ್ಲಿದೆ. ಕಾದಂಬರಿಯಲ್ಲಿ ೩ ತಲೆಮಾರುಗಳ ಚಿತ್ರಣವಿದೆ. ಕಷ್ಟ, ಛಲ, ಹೋರಾಟ, ನೋವು, ನಲಿವು, ಉಡಾಫೆ, ವ್ಯಂಗ್ಯ, ದುಷ್ಟತನ, ಕುತಂತ್ರ, ಪ್ರೀತಿ, ಮಮತೆ ಎಲ್ಲವೂ ಇಲ್ಲಿ ಮಿಳಿತಗೊಂಡಿವೆ. ಕಾದಂಬರಿಯ ಮುಖ್ಯ ನಾಯಕಿ ಭೂತಾಯವ್ವ ಭೂಮಿಗಾಗಿ ಹೋರಾಟ ಮಾಡುವ ತನ್ನ ಹಕ್ಕನ್ನು ಚಲಾಯಿಸಲು ಅಧಿಕಾರಶಾಹಿ ವ್ಯವಸ್ಥೆಯ ವಿರುದ್ಧ ಸೆಣಸುವ, ಸೆಡ್ಡು ಹೊಡೆವ ಛಲಗಾರ್ತಿಯಾಗಿ ಕಂಡುಬರುತ್ತಾಳೆ. 
         ಭೂತಾಯವ್ವನ ಪತಿ ಶಿವಕುಮಾರ ಲಂಪಟ, ಕುಡುಕ, ಅವನ ಶೋಕಿಯಿಂದಾಗಿ ಇಡೀ ಕುಟುಂಬವೇ ಬೀದಿಪಾಲಾಗುತ್ತದೆ. ಇದರ ಲಾಭವನ್ನು ಪಟ್ಟಭದ್ರ ಹಿತಾಸಕ್ತಿಗಳು, ಅಧಿಕಾರಿಶಾಹಿ ವಲಯ ಪಡೆಯಲು ಹವಣಿಸುತ್ತದೆ. ತನಗೆ ಸೇರಿದ ಭೂಮಿಯನ್ನು ಊರಗೌಡ, ಶಾನುಭೋಗರು ಸೇರಿ ನುಂಗಿಹಾಕಲು ಯತ್ನಿಸಿದಾಗ ಅದನ್ನು ಮರಳಿ ಪಡೆಯಲು ಭೂತಾಯವ್ವ ವ್ಯವಸ್ಥೆಯ ವಿರುದ್ಧ ನಡೆಸುವ ಹೋರಾಟವೇ ಭೂತಾಯಿ ಕಾದಂಬರಿಯ ಕಥಾಹಂದರ.
         ಕಾದಂಬರಿಯ ಮೊದಲ ಭಾಗದಲ್ಲಿ ಭೂತಾಯವ್ವನ ಚಿತ್ರವನ್ನು, ಆಕೆಯ ಸ್ಥಿತಿಯನ್ನು ಕಣ್ಮುಂದೆ ತಂದು ನಿಲ್ಲಿಸಲಾಗುವುದು. ಎರಡನೇ ಭಾಗದಿಂದ ಭೂತಾಯವ್ವನ ಪತಿಯ ತಂದೆಯಾದ ಬಾಳಪ್ಪನಿಂದ ಕಥಾನಕ ಆರಂಭಗೊಳ್ಳುವುದು. ಆದರೆ ಒಂದನೇ ಭಾಗಕ್ಕೂ ಎರಡನೇ ಭಾಗಕ್ಕೂ ಕೊಂಡಿ ಇಲ್ಲದ್ದರಿಂದ ಓದುಗನಿಗೆ ಮೊದಲಿಗೆ ಗೊಂದಲವುಂಟಾಗುವುದು. ಭೂತಾಯವ್ವನ ಕಥಾನಕ ಆರಂಭಗೊಂಡ ಸಂದರ್ಭದಲ್ಲಿಯೇ ಧಿಡೀರನೇ ಆಕೆಯ ಮಾವ ಬಾಳಪ್ಪನ ಬದುಕಿನ ಚಿತ್ರಣ ಆರಂಭಗೊಳ್ಳುವುದು ಓದುಗನಿಗೆ ತಡೆಯುಂಟಾದಂತಾಗುವುದು. ಆದರೆ ಮುಂದುವರೆದಂತೆಲ್ಲ ಎಲ್ಲ ಪಾತ್ರಗಳು ನಿಚ್ಚಳವಾಗಿ ಕಾಣತೊಡಗುತ್ತವೆ. ಕೊನೆ ಕೊನೆಯಲ್ಲಿ ಅಂತ್ಯ ಹೇಗಾಗಬಹುದೆಂಬ ಕುತೂಹಲವನ್ನು ಓದುಗರಿಗೆ ಉಳಿಸುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ಕಥಾನಕ ಹೂವಿನ ಹಡಗಲಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದಲ್ಲಿ ನಡೆಯುತ್ತದೆ. ಗ್ರಾಮೀಣ ಭಾಗದ ಅದರಲ್ಲೂ ದುಡಿಯುವ ವರ್ಗದ ಸಂಕಷ್ಟಗಳು ಹಲವಾರು. ಅದರಲ್ಲಿಯೇ ಶೋಷಣೆ ಮಾಡುವ, ದಬ್ಬಾಳಿಕೆ ನಡೆಸುವ ಗ್ರಾಮದ ಗೌಡರು, ಶಾನುಭೋಗರ ಆಳ್ವಿಕೆ, ಇದಕ್ಕೆ ವ್ಯವಸ್ಥೆಯ ಬೆಂಬಲ ಬೇರೆ. ಹೀಗಾದಾಗ ಬಡ ರೈತನ ಕುಟುಂಬ ಹೇಗೆ ಅವಸಾನದತ್ತ ದಾಪುಗಾಲು ಹಾಕುತ್ತದೆ ಎಂಬ ನೋಟ ಇಲ್ಲಿದೆ. 
        ಕಷ್ಟಪಟ್ಟು ದುಡಿವ ರೈತ ಬಾಳಪ್ಪ, ಕಾಳವ್ವನಿಗೆ ಬಹುದಿನಗಳ ಬೇಡಿಕೆ, ದೇವರಿಗೆ ಹರಕೆ ಹೊತ್ತಂತೆ ಶಿವಕುಮಾರನೆಂಬ ಸುಂದರಾಂಗ ಹುಟ್ಟುತ್ತಾನೆ. ಬಹುದಿನಗಳ ಹಂಬಲದಂತೆ ಜನಿಸಿದ ಮಗ ಓದಿ ದೊಡ್ಡ ವ್ಯಕ್ತಿಯಾಗಬೇಕೆಂಬ ಹಂಬಲ ತಂದೆ ತಾಯಿಯದು. ಆದರೆ ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬಂತೆ ಮಗನಿಗೋ ನಾಟಕದ ಗೀಳು ಸೇರಿಬಿಡುತ್ತದೆ. ನಾಟಕದ ಹುಚ್ಚಿನಿಂದಾಗಿ ೧೦ನೇ ತರಗತಿಯನ್ನೂ ಪಾಸು ಮಾಡದ ಶಿವಕುಮಾರನನ್ನು ಅವನ ಗೀಳಿಗೆ ಮಣಿದು ಕೊನೆಗೆ ತಂದೆ ತಾಯಿಯೇ ನಾಟಕ ರಂಗಕ್ಕೆ ಅರ್ಪಿಸಿಬಿಡುತ್ತಾರೆ. ಅದು ಅನಿವಾರ್ಯವೂ ಆಗಿಬಿಡುವ ಪರಿಸ್ಥಿತಿ ಅಥವಾ ದುಸ್ಥಿತಿಯೆಂದರೂ ತಪ್ಪಲ್ಲ. ಹೊಲಮನೆ ಕಡೆ ನೋಡದ ಶೋಕಿಲಾಲ ಶಿವಕುಮಾರ ನಾಟಕದ ಸಹಪಾತ್ರಧಾರಿ ಶಾರದಳ ಮೇಲೆ ಅನುರಕ್ತನಾಗುತ್ತಾನೆ. ಅದಕ್ಕೂ ತಂದೆ ತಾಯಿ ಅಸ್ತು ಎನ್ನುತ್ತಾರೆ. ಆದರೆ ಶಾರದ ಮೊದಲ ಹೆರಿಗೆಯಲ್ಲಿಯೇ ನಿಧನಳಾಗುತ್ತಾಳೆ. ಮಗುವೂ ಅಸುನೀಗುತ್ತದೆ. ಅಲ್ಲಿಯವರೆಗೂ ಹದ್ದುಬಸ್ತಿನಲ್ಲಿದ್ದ ಶಿವಕುಮಾರ, ಹೆಂಡತಿಯ ಸಾವಿನ ದು:ಖದಲ್ಲಿ ಎಲ್ಲ ಚಟಗಳ ದಾಸನಾಗುತ್ತಾನೆ. ಚಟಗಳು ಬೆಳೆದಂತೆ ಹಣದ ಅವಶ್ಯಕತೆಯೂ ಹೆಚ್ಚುತ್ತದೆ. ಅದಕ್ಕೆ ತಕ್ಕಂತೆ ಹಣಕ್ಕಾಗಿ ಪರದಾಟ ಆರಂಭವಾಗುತ್ತದೆ. ತಾಯಿಯೂ ನಿಧನಳಾಗುತ್ತಾಳೆ. ಪರಿಸ್ಥಿತಿಯ ಲಾಭ ಪಡೆದ ಗ್ರಾಮದ ಜಮದಗ್ನಿಗೌಡ, ಶಾನುಭೋಗ ಹನುಮಂತರಾಯ ಶಿವಕುಮಾರನಿಗೆ ಸಾಲ ಕೊಟ್ಟು ಸಾಲದ ಶೂಲದಲ್ಲಿ ನೂಕುತ್ತಾರೆ. ಇದನ್ನರಿತ ತಂದೆ ಬಾಳಪ್ಪ, ನಾಟಕ ಕಂಪನಿಯ ಮಾಲಿಕರು ಸೇರಿ ಶಿವಕುಮಾರನಿಗೆ ಮತ್ತೊಂದು ಮದುವೆ ಮಾಡುತ್ತಾರೆ. ಆಕೆಯೇ ಭೂತಾಯವ್ವ. ಹೊಲದ ಬಗ್ಗೆ, ಮಣ್ಣಿನ ಬಗ್ಗೆ ಅತೀವ ಪ್ರೀತಿ, ಗೌರವ ಇಟ್ಟುಕೊಂಡಿದ್ದ ಭೂತಾಯವ್ವ ಕಷ್ಟಪಡುವ ಹೆಣ್ಣುಮಗಳು. ಯಾವ ಗಂಡಸಿಗೂ ಕಡಿಮೆಯಿಲ್ಲದಂತೆ ಹೊಲದಲ್ಲಿ ದುಡಿವವಳು. ಆದರೆ ಪತಿರಾಯ ಶಿವಕುಮಾರ ಗೌಡ, ಶಾನುಭೋಗನ ಮಾತಿಗೆ ಮರುಳಾಗಿ ಹಣದಾಸೆಗೆ ತನ್ನ ೧೦ ಎಕರೆ ಹೊಲದಲ್ಲಿ ೪ ಎಕರೆ ಹೊಲವನ್ನು ಮಾರುತ್ತಾನೆ. ಇದನ್ನು ತಿಳಿದ ಭೂತಾಯವ್ವ ರಣಚಂಡಿಯಾಗುತ್ತಾಳೆ. ಈ ಸಂದರ್ಭದಲ್ಲಿ ಗಂಡ ಶಿವಕುಮಾರ ಅಸಹಾಯಕ, ದುರ್ಬಲ ಪ್ರಾಣಿಯಂತೆಯೇ ಕಾಣುತ್ತಾನೆ. ಮಗನ ಹಣೆಬರಹ ಗೊತ್ತಿದ್ದ ತಂದೆ ಬಾಳಪ್ಪ ೬ ಎಕರೆ ಹೊಲವನ್ನು ತನ್ನ ಸೊಸೆ ಭೂತಾಯವ್ವನ ಹೆಸರಿನಿಂದ ಮಾಡುವಂತೆ ಶಾನುಭೋಗನಿಗೆ ತಿಳಿಸಿರುತ್ತಾನೆ. ಆದರೆ ನರಿಬುದ್ಧಿಯ ಶಾನುಭೋಗ ಅದನ್ನು ನೋಂದಣಿ ಮಾಡಿಸದೇ ಹಾಗೇ ಇಟ್ಟು ಪಹಣಿ ಮಾತ್ರ ಭೂತಾಯವ್ವನ ಹೆಸರಿನಿಂದ ಕೊಡುತ್ತಿರುತ್ತಾನೆ. ಕೊನೆ ಕೊನೆಗೆ ಶಿವಕುಮಾರ ತಾನು ಮೋಸ ಹೋಗಿದ್ದು ತಿಳಿದು ಪ್ರಾಮಾಣಿಕವಾಗಿ ನಾಟಕ ರಂಗದಲ್ಲಿಯೇ ದುಡಿಯತೊಡಗುತ್ತಾನೆ. ಕೊನೆಗೆ ನಾಟಕದ ಸಂದರ್ಭದಲ್ಲಿಯೇ ಅಸುನೀಗುತ್ತಾನೆ. ಇದನ್ನರಿತ ಚಾಣಾಕ್ಷ ಗೌಡ, ಶಾನುಭೋಗ ೬ ಎಕರೆ ಹೊಲವನ್ನು ಶಿವಕುಮಾರನ ಫೋರ್ಜರಿ ಸಹಿಯೊಂದಿಗೆ ತಮ್ಮದಾಗಿಸಿಕೊಳ್ಳುತ್ತಾರೆ. ಈ ಭಾಗದಿಂದ ವಿಧವೆಯಾದ ಭೂತಾಯವ್ವನ ಆಕ್ರೋಶ, ರೋಷ, ಛಲ, ಹಟಮಾರಿತನ, ಜಿಗುಟುತನಗಳು ಪ್ರಕಟಗೊಳ್ಳುತ್ತವೆ. ತನಗಾದ ಅನ್ಯಾಯಕ್ಕಾಗಿ ತನ್ನ ಇಬ್ಬರು ಮಕ್ಕಳೊಂದಿಗೆ ಹೋರಾಟಕ್ಕೆ ತೊಡಗುತ್ತಾಳೆ. ಒಬ್ಬಂಟಿಗಳಾಗಿ ವ್ಯವಸ್ಥೆಯ ವಿರುದ್ಧ ಹೋರಾಡುವುದು ಅಷ್ಟು ಸುಲಭದ ಮಾತಲ್ಲ. ಕೊನೆಗೆ ಭೂತಾಯವ್ವನ ಮನೆಯನ್ನು ಕಸಿದುಕೊಂಡು ಊರನ್ನೇ ಬಿಡಿಸುತ್ತಾರೆ ಗೌಡ, ಶಾನುಭೋಗರು. ಹೂವಿನ ಹಡಗಲಿ ಪಟ್ಟಣ ಸೇರುವ ಭೂತಾಯವ್ವ ತನಗಾದ ಮೋಸ, ಅನ್ಯಾಯಕ್ಕಾಗಿ ಅಧಿಕಾರಿಗಳ ಬಳಿ ಅಲೆದಾಡುತ್ತಾಳೆ. ಕೂಲಿಯಿಂದ ಬಂದ ಹಣದಲ್ಲಿ ಸಂಸಾರ ನಿರ್ವಹಿಸುತ್ತಾಳೆ. ವಕೀಲರ ಬಳಿ ಅಲವತ್ತುಗೊಳ್ಳುತ್ತಾಳೆ. ಜನಪ್ರತಿನಿಧಿಗಳ ಬಳಿ, ಸಚಿವರ ಬಳಿಯೂ ಮನವಿ ಮಾಡುತ್ತಾಳೆ. ಆದರೆ ಎಲ್ಲರೂ ಈಕೆಯನ್ನು ಹುಚ್ಚಿ ಎಂದೇ ಪರಿಗಣಿಸುತ್ತಾರೆ. ತನ್ನ ೬ ಎಕರೆ ಹೊಲವನ್ನು ಪಡೆಯಲೇಬೇಕೆಂಬ ಛಲದಿಂದ ಕೊನೆಗೆ ಹೋರಾಟಗಾರರ, ಸಂಘಟನೆಗಳ ನೆರವಿನೊಂದಿಗೆ ನೇರ ನ್ಯಾಯಾಧೀಶರಿಗೆ ಮನವಿ ಸಲ್ಲಿಸುತ್ತಾಳೆ. ಇದ್ದ ಇಬ್ಬರು ಹೆಣ್ಣುಮಕ್ಕಳಲ್ಲಿ ಒಬ್ಬಳು ಡೆಂಗೆ ಜ್ವರದಿಂದ ಸಾವಿಗೀಡಾರೆ, ಮತ್ತೊಬ್ಬಳು ಪ್ರೇಮಪ್ರಕರಣದಲ್ಲಿ ಸಿಲುಕಿ ದೂರದೂರಿನಲ್ಲಿ ನೆಲೆಸುತ್ತಾಳೆ. ಅಲ್ಲಿಂದ ಕಾದಂಬರಿ ತಿರುವು ಪಡೆದುಕೊಳ್ಳುತ್ತದೆ. ಅದುವರೆಗೂ ಭೂತಾಯವ್ವನ ಕಷ್ಟ, ಗೋಳು, ಅಳಲು, ಸಂಕಟಗಳಲ್ಲಿ ಮುಳುಗುವ ಓದುಗನಿಗೆ ಮುಂದೇನಾದೀತೋ ಎಂಬ ಕುತೂಹಲ ಮೂಡತೊಡಗುತ್ತದೆ. ನ್ಯಾಯಾಧೀಶರಿಂದ ಸರಿಯಾದ ನ್ಯಾಯನಿರ್ಣಯ ಭೂತಾಯವ್ವನಿಗೆ ದೊರೆಯುತ್ತದೆ. ಭೂತಾಯವ್ವನಿಗೆ ಜಮೀನು, ಗೌಡ ಶಾನುಭೋಗ ಅಧಿಕಾರಿಗಳಿಗೆ ತಕ್ಕ ಶಾಸ್ತಿ ಆಗುತ್ತದೆ. ಆದರೆ ಭೂತಾಯವ್ವ ತನಗೆ ದೊರೆತ ಜಮೀನನ್ನು ತನ್ನ ಗ್ರಾಮದ ಶಾಲೆಗೇ ದಾನ ಮಾಡುತ್ತಾಳೇ. ತನಗಿನ್ನಾರು ಇಲ್ಲ, ನನಗಾಗಿ ಏನೂ ಬೇಡ ಎಂಬ ಭಾವದೊಂದಿಗೆ ತ್ಯಾಗಮಯಿಯಾಗಿ ತನ್ನ ಜಮೀನನ್ನು ಅರ್ಪಿಸಿ ನ್ಯಾಯಾಲಯದಲ್ಲಿಯೇ ಪ್ರಾಣಬಿಡುತ್ತಾಳೆ. ನಿಜವಾದ ಭೂತಾಯವ್ವ ಎಂದು ಎಲ್ಲರೂ ಪ್ರಶಂಸಿಸುತ್ತಾರೆ. 
            ಇಡೀ ಕಾದಂಬರಿಯಲ್ಲಿ ಅಪ್ಪಟ ಗ್ರಾಮೀಣ ಭಾಷೆಯ ಸಂಭಾಷಣೆ ಇದೆ. ಹಡಗಲಿಯ ಭಾಗದ ಗ್ರಾಮೀಣ ಭಾಷೆಯ ಸೊಗಡನ್ನು ಲೇಖಕರು ಬಳಸಿದ್ದಾರೆ. ಕಾದಂಬರಿಯಲ್ಲಿ ಗಾದೆಮಾತು, ನುಡಿಗಟ್ಟುಗಳನ್ನು ಧಾರಾಳವಾಗಿ ಬಳಸಲಾಗಿದೆ. ಮೊದಲ ೨ ಭಾಗಗಳನ್ನು ಹೊರತುಪಡಿಸಿದರೆ ಕಾದಂಬರಿಯ ಓಟಕ್ಕೆ ತೊಂದರೆಯೇನಿಲ್ಲ. ಇದು ಸತ್ಯಕತೆ ಎಂದು ಲೇಖಕರು ಹೇಳಿರುವರಾದರೂ ಎಲ್ಲಿಯೂ ಕಾದಂಬರಿ ನೀರಸವೆನಿಸುವುದಿಲ್ಲ. ಕಾದಂಬರಿಯ ಕಥಾನಕದ ಚೌಕಟ್ಟಿಗೆ ಸತ್ಯಕತೆಯನ್ನು ಒಗ್ಗಿಸಿಕೊಳ್ಳಲಾಗಿದೆ. ಸುತ್ತಲೂ ದಿನನಿತ್ಯ ನಡೆಯುವ ರೈತರ ಸಂಕಷ್ಟದ ಬದುಕು, ರಂಗಭೂಮಿ ಕಲಾವಿದರ ಬದುಕಿನ ಬವಣೆಯನ್ನು ಕಾದಂಬರಿ ಸಮರ್ಥವಾಗಿ ಹಿಡಿದಿಟ್ಟಿದೆ. ಸತ್ಯಕತೆಯೆಂಬ ಕಾರಣಕ್ಕಾಗಿಯೇನೋ ಎಂಬಂತೆ ಕಾದಂಬರಿಯಲ್ಲಿ ಕೆಲವೆಡೆ ಬರುವ ಪಾತ್ರಗಳು ಬದುಕಿನ ನಿಜವಾದ ಪಾತ್ರಗಳೇ ಆಗಿವೆ. ಉದಾಹರಣೆಗೆ ಹೋರಾಟ, ಜನಪರ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಪೀರಬಾಷ, ಶೇಷಗಿರಿರಾವ್, ಹಿರೇಮಠರುಗಳನ್ನು ಬಳಸಿಕೊಳ್ಳಲಾಗಿದೆ. ಅವರ ಪಾತ್ರಗಳು ಕತೆಗೆ ಪೂರಕವಾಗಿಯೂ ಇವೆ. ಹೂವಿನ ಹಡಗಲಿಯ ಕುರಿತು ಸಣ್ಣ ಟಿಪ್ಪಣಿಯೂ ಕಾದಂಬರಿಯಲ್ಲಿ ಮೂಡಿಬಂದಿದೆ. 
ಎನ್.ಎಂ.ಕೊಟ್ರೇಶ್ ಅವರಿಗೆ ಭಾಷೆಯನ್ನು ಆಯಾ ಸಂದರ್ಭಕ್ಕೆ ತಕ್ಕಂತೆ ಬಳಸುವ ಕಲೆಯೂ ಸಿದ್ಧಿಸಿದೆ. ಉದಾಹರಣೆಗೆ ಅದೆ ಹಡಗಲಿಯಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದ ದೊಡ್ಡಮಠ ಎನ್ನುವ ನಾಮಧೇಯ ವ್ಯಕ್ತಿ ಕಮ್ಯುನಿಷ್ಟ್ ಮ್ಯಾನಿಫೆಸ್ಟೊವನ್ನು ಕೈಯಲ್ಲಿ ಹಿಡಿದುಕೊಂಡು ಇಲ್ಲಿಯ ಮಣ್ಣಿಗೆ ಕಾರಲ್ ಮಾರ್ಕ್ಸ್‌ನ ಸ್ಪರ್ಶ ನೀಡುವ ಹಂಬಲದಿಂದ ಉತ್ಸಾಹಿ ಯುವಕರನ್ನೆಲ್ಲ ಹುರಿದುಂಬಿಸಿ ಚಳುವಳಿಯಲ್ಲಿ ಧುಮುಕಿಸುತ್ತಿದ್ದರು. ತೇಟ್ ಒಮ್ಮೊಮೆ ಚ ಗುವೇರನಂತೆ ಇನ್ನೊಮ್ಮೆ ಫಿಡಲ್ ಕ್ಯಾಸ್ಟ್ರೊನಂತೆ ಮಾತನಾಡುತ್ತಿದ್ದ ಈತ ಓಚಿಮಿನ್ನಿನಂತೆ ಗಡ್ಡಬಿಟ್ಟು ಸದಾ ಖಾದಿ ತರಹದ ಬಣ್ಣದ ಜುಬ್ಬ ಪ್ಯಾಂಟು ತೊಟ್ಟು ಹಡಗಲಿ ತುಂಬ ಅವ್ವಿಲಿ, ಅಪ್ಪಿಲಿ, ಅಣ್ಣಿಲಿ, ತಮ್ಮಿಲಿ ಅಕ್ಕಿಲಿ, ಮರಿಯಿಲಿ, ಮುದಿಯಿಲಿ ಎಲ್ಲರನ್ನು ತನ್ನ ಕಮ್ಯುನಿಷ್ಟ್ ಪೀಪಿಯನ್ನು ಊದುತ್ತ ಹಿಂದೆ ಹಿಂದೆ ಎಳೆದುಕೊಂಡು ಕಿಂದರಿ ಜೋಗಿಯಂತೆ ಸುತ್ತಾಡುತ್ತಿದ್ದರು. 
                     ಇಡೀ ಕಾದಂಬರಿಯಲ್ಲಿ ಗ್ರಾಮೀಣ ಭಾಗದ ಸಂಭಾಷಣೆಯ ಸೊಗಡಿದ್ದರೆ, ಕೆಲವೆಡೆ ಮಾತ್ರ ಸಾಹಿತ್ಯಕವಾದ ವರ್ಣನೆಗಳು ಕಾಣಸಿಗುತ್ತವೆ. ಲೇಖಕರ ಕವಿತ್ವ ಇಲ್ಲಿ ಪ್ರಕಟಗೊಳ್ಳುತ್ತದೆ. ಉದಾ: ಸೂರ್ಯ ಮಾತ್ರ ಎಂದಿನ ದಿನನಿತ್ಯದ ಅರಳುವ ಮಂದಹಾಸದಂತೆಯೆ ಇಂದು ಸಹ ಅದೆ ನವ ನವೀನ ಎಳೆ ನಗೆಯನ್ನು ಹೊರಸೂಸುತ್ತ ಮೇಲೇರಿ ಬರುತ್ತಿದ್ದ. ಅವನಿಗೆ ಅವರು ಹೆಚ್ಚು, ಇವರು ಕಡಿಮೆ ಎನ್ನದೆ ಜಗತ್ತಿನ ಎಲ್ಲ ಚರಾಚರಗಳನ್ನು ಸಮಚಿತ್ತದಿಂದಲೆ ತನ್ನ್ನ ಹೊಂಬೆಳಕು ಚೆಲ್ಲುತ್ತಿದ್ದ. ಹಡಗಲಿಯ ಹೂತೋಟಗಳ ಬಗ್ಗೆಯೂ ಇದೇ ರೀತಿಯ ವರ್ಣನೆಗಳು ಕಾಣಸಿಗುತ್ತವೆ. ಅದೇ ರೀತಿಯಲ್ಲಿಯೇ ಪ್ರತಿಭಟನೆಯ ಕಾವನ್ನೂ ಎನ್.ಎಂ.ಕೊಟ್ರೇಶ್ ಅವರು ಸಮರ್ಥವಾಗಿ ಹಿಡಿದಿಡುತ್ತಾರೆ. ಭೂತಾಯವ್ವ ತನ್ನ ಹರಕು ಸೀರೆಯಲ್ಲಿ ಛಲವೆಂಬ ಪ್ರಖರವಾದ ಕೆಂಡದುಂಡೆಗಳನ್ನು ಕಟ್ಟಿಕೊಂಡು ಊರಿನಿಂದ ಹೊರಟಿದ್ದಳು. ಅಲ್ಲದೆ ತೆಳ್ಳನೆಯ ಬಡಕಲು ದೇಹಧಾರಿಯಾಗಿದ್ದರು ನೂರು ಮಂದಿ ಮೀಸೆ ಹೊತ್ತ ಗಂಡಸರ ವಿರುದ್ಧ ಏಕಕಾಲದಲ್ಲಿ ಸೆಣಸುವ ಛಲೋನ್ಮತ್ತ ಆತ್ಮವಿಶ್ವಾಸ ಉಳ್ಳ ಹೆಂಗಸಾಗಿದ್ದಳು ಭೂತಾಯವ್ವ ಎಂಬ ವಾಕ್ಯಗಳು ಪ್ರತಿಭಟನೆಯನ್ನು ಧ್ವನಿಸುತ್ತವೆ.
                    ಪುರುಷ ಪ್ರಧಾನ ಸಮಾಜದಲ್ಲಿ ಒಂಟಿ ಮಹಿಳೆ ಹೋರಾಡುವುದು ಸುಲಭವಲ್ಲ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ದಬ್ಬಾಳಿಕೆ, ದೌರ್ಜನ್ಯ, ಶೋಷಣೆ ನಿರಂತರವಾಗಿ ಶತಶತಮಾನಗಳಿಂದ ನಡೆಯುತ್ತಲೇ ಬಂದಿದೆ. ಹೆಣ್ಣಿನ ಭಾವನೆ, ವಿಚಾರಗಳಿಗೆ ಎಂದೂ ಆಸ್ಪದ ಕೊಡದ ಪುರುಷರ ಅಹಮಿಕೆಗೆ ಪೆಟ್ಟು ಕೊಡುವುದು ವ್ಯವಸ್ಥೆಯಲ್ಲಿ ಬಹಳ ಕಷ್ಟವಾದುದು. ಹೆಣ್ಣಿನ ಅಸಹಾಯಕತೆ, ತಾಳ್ಮೆ, ದುರ್ಬಲತೆಗಳನ್ನೇ ಬಂಡವಾಳವನ್ನಾಗಿ ಮಾಡಿಕೊಳ್ಳುವ ಪುರುಷರು ನಿರಂತರವಾಗಿ ಎಲ್ಲ ರೀತಿಯಿಂದಲೂ ಶೋಷಿಸುತ್ತಲೇ ಬಂದಿದ್ದಾರೆ. ಆಧುನೀಕರಣಗೊಂಡಿರುವ ನಗರ, ಪಟ್ಟಣ ಪ್ರದೇಶಗಳಲ್ಲಿ ಮಹಿಳೆಯರ ಮೇಲೆ ಒಂದು ರೀತಿಯ ದೌರ್ಜನ್ಯ ನಡೆದರೆ, ಗ್ರಾಮೀಣ ಭಾಗದಲ್ಲಿ ಮತ್ತೊಂದು ರೀತಿ. ಮಹಿಳೆ ಎಲ್ಲ ರಂಗದಲ್ಲೂ ಮುಂದೆ ಬರಬೇಕೆನ್ನುವ ಸಮಾಜ ಸದಾಕಾಲ ಹೆಣ್ಣಿಗೆ ಕಂದಾಚಾರ, ಸಂಪ್ರದಾಯಗಳ ಬೇಡಿಯನ್ನು ಆಕೆಯ ಕಾಲಿಗೆ ತೊಡಿಸಿಯೇ ಮಾತನಾಡುತ್ತದೆ. ಗ್ರಾಮಗಳಲ್ಲಿ ಇಡೀ ವ್ಯವಸ್ಥೆಯೇ ಹೆಣ್ಣನ್ನು ಹದ್ದುಬಸ್ತಿನಲ್ಲಿಡುವ ರೀತಿಯಲ್ಲಿರುತ್ತದೆ. ಹೀಗಾಗಿಯೇ ಭೂತಾಯಿ ಕಾದಂಬರಿಯಲ್ಲಿ ಭೂತಾಯವ್ವನ ಹೋರಾಟಕ್ಕೆ ಗ್ರಾಮದ ಜನತೆ ಬೆಂಬಲಿಸದೇ ಮೂಕ ಪ್ರೇಕ್ಷಕರಾಗಿರುತ್ತಾರೆ. ಕಾದಂಬರಿಯಲ್ಲಿ ಭೂತಾಯವ್ವನಿಗೆ ತನಗಾದ ಅನ್ಯಾಯ, ನ್ಯಾಯ ಒದಗಿಸದ ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಆಕ್ರೋಶವಿದೆ, ಛಲವಿದೆ. ಆದರೆ ಅದನ್ನು ನ್ಯಾಯಯುತವಾಗಿಯೇ ಪಡೆಯುವೆನೆಂಬ ತಾಳ್ಮೆಯೂ ಎಚ್ಚರಿಕೆಯೂ ಇದೆ. ಹೀಗಾಗಿ ಗೌಡ, ಶಾನುಭೋಗರ ವಿರುದ್ಧ ಹೋರಾಡಲು ನ್ಯಾಯದ ಮಾರ್ಗವನ್ನೇ ಭೂತಾಯವ್ವ ಕಂಡುಕೊಳ್ಳುತಾಳೆಯೇ ಹೊರತು ಹಿಂಸಾತ್ಮಕ ಮಾರ್ಗವನ್ನಲ್ಲ. ಕಾದಂಬರಿ ಓದುತ್ತ ಹೋದಂತೆ ಭೂತಾಯವ್ವ ತನಗಾದ ನೋವು, ನಿರಾಶೆ, ಅನ್ಯಾಯಗಳಿಂದ ನೊಂದು ಎಲ್ಲಿ ಹಿಂಸಾತ್ಮಕ ಮಾರ್ಗ ಹಿಡಿಯುತ್ತಾಳೋ ಎನಿಸುತ್ತದೆ. ಆದರೆ ಭೂತಾಯವ್ವನ ಒಡಲಲ್ಲಿ ಬೆಂಕಿ ಇದ್ದರೂ ಅದು ನ್ಯಾಯದ ಸಂಯಮ ಮಾರ್ಗದಲ್ಲಿಯೇ ಇರುತ್ತದೆ ಎಂಬುದು ಗಮನಾರ್ಹ.
      ಕಾದಂಬರಿಯಲ್ಲಿ ಅಲ್ಲಲ್ಲಿ ಮುದ್ರಣ ದೋಷಗಳೂ ನುಸುಳಿವೆ. ಪುಟಗಳ ಸಂಖ್ಯೆ ಹೆಚ್ಚಾಗಬಾರದೆಂದೋ ಏನೋ ಅಕ್ಷರಗಳೂ ಚಿಕ್ಕದಾಗಿವೆ. ಒಟ್ಟಾರೆ ಕಾದಂಬರಿಯನ್ನು ಓದುತ್ತ ಹೋದಂತೆ ಇವೆಲ್ಲ ಗೌಣವಾಗಿ ಕಥಾಹಂದರ ಮಾತ್ರ ಕಣ್ಮುಂದೆ ಕಟ್ಟಿಕೊಳ್ಳುತ್ತದೆ. ಈ ದಿಸೆಯಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ಕನ್ನಡ ಸಾರಸ್ವತ ಲೋಕಕ್ಕೆ ಭೂತಾಯಿ ವಿಶಿಷ್ಟವಾದ ಕೊಡುಗೆಯಾಗಿದೆ. 

Monday, April 21, 2014

ಆಪರೇಷನ್ ಮಂಕಿ ಎಂಬ ಕಾರ್ಯಾಚರಣೆ


                          ಅರೆ ನಜೀರ್ ರಸ್ಸೀಕೊ ಸಹಿ ಪಕಡ್, ನಹಿತೊ ಉಸ್‌ಕೊ ಶಕ್ ಆಯೇಗಾ ಎಂಬ ಮಾತುಗಳು ಬೃಹದಾಕಾರದ ಮರದ ಕೆಳಗಿನಿಂದ ಕೇಳಿಬಂದವು. ಮಾರ್ಕೆಟ್‌ನಿಂದ ಮರಳಿ ಬರುವಾಗ ಮಾರ್ಗದಲ್ಲಿ ಪಂಜರಗಳು, ೪-೫ ಜನ ಕೆಲಸಗಾರರು, ಅವರನ್ನು ನಿಯಂತ್ರಿಸುತ್ತಿರುವ ಕೆಂಪು ಗಡ್ಡ, ತಲೆಯ ವ್ಯಕ್ತಿಯೊಬ್ಬರನ್ನು ನೋಡಿದೊಡನೆ ನನ್ನ ಕುತೂಹಲ ಹೆಚ್ಚಾಯಿತು. ಇಲ್ಲಿ ಏನೋ ನಡೆದಿದೆ ಎಂದು ಮೆಲ್ಲನೆ ಅವರ ಬಳಿ ಸಾಗಿದೆ. 
                                         ಕೂಡ್ಲಿಗಿ ಪಟ್ಟಣದಲ್ಲಿ ಇತ್ತೀಚೆಗೆ ಮಂಗಗಳ ಹಾವಳಿ ವಿಪರೀತವಾಗಿದ್ದುದರಿಂದ ಪಟ್ಟಣ ಪಂಚಾಯ್ತಿ ವತಿಯಿಂದ ಮಂಗಗಳನ್ನು ಹಿಡಿಯುವ ಅನುಭವಿಗಳನ್ನು ದೂರದ ಮಹಾರಾಷ್ಟ್ರದ ಮೀರಜ್‌ನಿಂದ ಕರೆಸಲಾಗಿತ್ತು. ಪಟ್ಟಣದಲ್ಲಿನ ಮಂಗಗಳನ್ನೆಲ್ಲ ಹಿಡಿದು ಬೇರೆಡೆ ಸಾಗಿಸುವ ಜವಾಬ್ದಾರಿ ಅವರದು. ಗುಂಪಿನ ನಾಯಕನ ಹೆಸರು ಶಬ್ಬೀರ್ ಹನೀಫ್ ಶೇಖ್. ಇಂತಹ ಗುಂಪು ಮರಗಳ ಮೇಲಿನ ಮಂಗಗಳನ್ನು ಉಪಾಯವಾಗಿ ಪಂಜರದಲ್ಲಿ ಹಿಡಿಯುತ್ತಿರುವ ಅಪರೂಪದ ದೃಶ್ಯ ಕಂಡುಬಂದಿತು. ಮೊದಲೇ ಚಂಚಲ ಸ್ವಭಾವದ ಮಂಗಗಳು ಇವರ ಬಲೆಗೆ ಹೇಗೆ ಬಿದ್ದಾವು ಎಂಬ ಕುತೂಹಲ ಹಾಗೂ ಆಶ್ಚರ್ಯ. ತಡೆಯಲಾರದೆ ಕೆಂಪುಗಡ್ಡದ ಲೀಡರ್‌ನ್ನು ಕೇಳಿಯೇಬಿಟ್ಟೆ. ಸಾಬ್ ಇವ್ರು(ಮಂಗಗಳು) ಇದಾರಲ್ಲ, ಭಾಳ ಹುಶಾರಾಗಿರ್ತಾರೆ. ಅವ್ರನ್ನ ಹಿಡೀಲಿಕ್ಕೆ ಭಾಳಾ ಯೋಚ್ನೆ ಮಾಡ್ಬೇಕು ಎಂದ. ಅಲ್ಲದೆ ಮತ್ತೊಂದು ವಿಶೇಷವನ್ನು ಶಬ್ಬೀರ್ ತಿಳಿಸಿದ್ದೇನೆಂದರೆ, ಬೆಳಿಗ್ಗೆ, ಸಾಯಂಕಾಲ ಅವ್ರು ಓಡಾಡ್ತಾರೆ, ಮಧ್ಯಾಹ್ನ ನಿದ್ದಿ ಮಾಡ್ತಾರೆ, ಆವಾಗ ಅವ್ರು ಸಿಗಲ್ಲ ಎಂದದ್ದು. ಅದಾವ ಮಾಯಾಮಂತ್ರ ಮಾಡುತ್ತಾನೋ ಈತ ಎಂದು ನೋಡತೊಡಗಿದೆ. ಮರಗಳ ಮೇಲಿನ ಮಂಗಗಳಲ್ಲಿ ನಾಯಕ ಮಂಗವೇ ಇವರ ಮೊದಲ ಗುರಿ. ಅದು ಬಂದರೆ ಉಳಿದೆಲ್ಲ ಬರುತ್ತವೆ ಎಂಬ ಟೆಕ್ನಿಕ್ ಇವರದು.
                                    ಮಂಗಗಳು ಇರುವ ಮರಗಳ ಕೆಳಗೆ ತಂತಿ ಜಾಲರಿ ಇರುವ ಪಂಜರಗಳ ಬಾಗಿಲನ್ನು ತೆರೆದು ಇರಿಸಲಾಗುತ್ತದೆ. ಪಂಜರದ ಮುಂದೆ ಒಳಗೆಲ್ಲ ಮಂಗಗಳಿಗೆ ಇಷ್ಟವಾಗುವ ಬಾಳೆಹಣ್ಣು, ಶೇಂಗಾಗಳನ್ನು ಚೆಲ್ಲಲಾಗುತ್ತದೆ. ಬಾಗಿಲ ಹಗ್ಗವನ್ನು ಹಿಡಿದು ಒಬ್ಬ ದೂರದಲ್ಲಿ ಅನುಮಾನ ಬರದಂತೆ ಕುಳಿತಿರುತ್ತಾನೆ. ಮೊದಲಿಗೆ ಮಂಗಗಳು ಪಂಜರದ ಒಳಗೆಲ್ಲ ಓಡಾಡಿ ಹಣ್ಣುಗಳು, ಶೇಂಗಾ ಇತರ ತಿನಿಸುಗಳನ್ನು ನಿರ್ಭಯವಾಗಿ ತೆಗೆದುಕೊಂಡು ಹೋಗಲು ಬಿಡಲಾಗುತ್ತದೆ. ಇದರಿಂದ ಅವುಗಳಿಗೆ ಇಲ್ಲಿ ಯಾವ ಅಪಾಯವೂ ಇಲ್ಲ ಎಂಬ ನಂಬಿಕೆ ಬರುತ್ತದೆ. ಹೀಗೆ ನಂಬಿಕೆ ಬಂದ ಹಲವಾರು ಮಂಗಗಳು ಪಂಜರದೊಳಗೆ ಬಂದೊಡನೆ ಹಗ್ಗ ಹಿಡಿದವನು ಬಾಗಿಲು ಜಗ್ಗುತ್ತಾನೆ. ಒಳಗೆ ಬಂದ ಮಂಗಗಳನ್ನು ಉಪಾಯವಾಗಿ ಅದಕ್ಕೆ ಜೋಡಿಸಿದ ಮತ್ತೊಂದು ಪಂಜರದೊಳಗೆ ಕೂಡಿಹಾಕಲಾಗುತ್ತದೆ. ಮತ್ತೆ ಮೊದಲಿನ ಪಂಜರವನ್ನು ಬಾಗಿಲು ತೆಗೆದು ಸಿದ್ಧಪಡಿಸಲಾಗುತ್ತದೆ. ಎಲ್ಲ ಮಂಗಗಳೂ ಪಂಜರದೊಳಗೆ ಬಂದು ಬೀಳುವವರೆಗೆ ಇದು ಪುನರಾವರ್ತನೆಯಾಗುತ್ತದೆ. ಎಲ್ಲ ಸುಲಭದ ಕೆಲಸವಲ್ಲ ಎಂದು ನನಗನ್ನಿಸಿತು. ಹಾಗಂತ ಶಬ್ಬೀರ್‌ರನ್ನು ಕೇಳಿದೆ. ಅವರು ನಕ್ಕು, ಇವ್ರು ಮೊದ್ಲಿಗೆ ಬೀಳೋದು ಸುಲಭ ಅನ್ಸುತ್ತೆ ಸಾಬ್, ಇನ್‌ಮೇಲೆ ನೋಡಿ, ಅನುಮಾನ ಬಂದು ಒಬ್ರೂ ಬರೋದಿಲ್ಲ ಎಂದ. ಏನಾಶ್ಚರ್ಯ, ಶಬ್ಬೀರ್ ಹೇಳಿದಂತೆ ಕೆಲವು ಅನುಮಾನ ಬಂದ ಮಂಗಗಳು ಕೆಳಗಿಳಿಯಲೇ ಇಲ್ಲ. ಇದು ನಮ್ಗೆ ಸವಾಲ್ ಸಾಬ್, ನಮ್ ಕಷ್ಟ್ ಎಲ್ಲ ಈಗೈತೆ ನೋಡಿ ಎಂದು ಶಬ್ಬೀರ್ ಹೇಳಿದರು. ಬೆಳಿಗ್ಗೆ ೧೦ಕ್ಕೆ ಶುರುವಾದ ಇವರ ಕಾರ್ಯಾಚರಣೆ ಸಂಜೆಯವರೆಗೆ ಮುಂದುವರೆದಿತ್ತು. ಬೆಳಿಗ್ಗೆ ಅತ್ಯಂತ ವೇಗವಾಗಿ ಬಂದು ಬಲೆಗೆ ಬಿದ್ದ ಮಂಗಗಳು ಬರುಬರುತ್ತ ಹಿಡಿಯುವುದೇ ಕಷ್ಟವಾಗತೊಡಗಿತು. ಛಲ ಬಿಡದ ತ್ರಿವಿಕ್ರಮನಂತೆ ಶಬ್ಬೀರ್ ಸಂಜೆಯವರೆಗೆ ಶ್ರಮವಹಿಸಿ ಸುಮಾರು ೩೦ ಮಂಗಗಳನ್ನು ಹಿಡಿದರು. 
                                      
                          ಹಿಡಿದ ಮಂಗಗಳನ್ನು ಏನು ಮಾಡುವಿರೆಂದು ಶಬ್ಬೀರ್‌ನನ್ನು ಕೇಳಿದೆ. ಅಲ್ಲಾನ ಆಣೆಯಾಗಿ ಹಿಡ್ದಿರೋ ಇವ್ರನ್ನ ಲಕ್ಷ ರೂ.ಗಳ್ನ ಕೊಟ್ರೂ ಮಾರಾಟ ಮಾಡೋದಿಲ್ಲ ಸಾಬ್, ಅವ್ರಿಂದ ನಮ್ ಹೊಟ್ಟೆ ತುಂಬ್ತೈತೆ, ಅವ್ರಿಗೆ ಅನ್ಯಾಯ ಆದ್ರೆ ಅಲ್ಲಾ ಮೆಚ್ತಾನಾ? ಅವ್ರನ್ನ ಹಂಪಿ ಹತ್ರ ಕಾಡೈತಲ್ಲಾ ಅಲ್ಲಿ ಬಿಟ್ಟು ಬರ್ತೇವೆ ಸಾಬ್. ಅಲ್ಲಿ ಅವ್ರು ಆರಾಮಾಗಿ ಇರ್ತಾರೆ ಎಂದು ಶಬ್ಬೀರ್ ಹೇಳಿದರು. ಪಂಜರದಲ್ಲಿ ಬಂದಿಯಾದ ಮಂಗಗಳನ್ನು ಪಟ್ಟಣ ಪಂಚಾಯ್ತಿಯ ಟ್ರ್ಯಾಕ್ಟರ್‌ನಲ್ಲಿ ಒಯ್ಯಲಾಯಿತು. ಮರುದಿನ ಶಬ್ಬೀರ್ ಮತ್ತು ಅವರ ತಂಡ ಪಟ್ಟಣದ ಬೇರೊಂದೆಡೆ ದಟ್ಟವಾದ ಮರಗಳಿದ್ದಲ್ಲಿ ಇರುವ ಮಂಗಗಳಿಗಾಗಿ ಪಂಜರ ಸಿದ್ಧಪಡಿಸಿ ಕುಳಿತಿರುವುದು ಕಂಡುಬಂದಿತು. ಈ ಪ್ರಕ್ರಿಯೆ ನಿರಂತರವಾಗಿ ೪ ದಿನಗಳವರೆಗೆ ನಡೆಯಿತು. ಶಬ್ಬೀರ್‌ನದು ಇದೇ ಕಾಯಕ ಎಂದು ತಿಳೀದುಬಂದಿತು. ರಾಜ್ಯದಾದ್ಯಂತವಲ್ಲದೆ ಹೊರರಾಜ್ಯಗಳಲ್ಲೂ ಮಂಗಗಳನ್ನು ಹಿಡಿಯುವ ಅಧಿಕೃತ ಎಕ್ಸ್‌ಪರ್ಟ್ ಎಂದೇ ಖ್ಯಾತರಾಗಿರುವ ಶಬ್ಬೀರ್ ಒಂದು ಮಂಗ ಹಿಡಿಯಲು ೩೦೦ ರೂ.ಗಳ ಶುಲ್ಕ ಪಡೆಯುತ್ತಾರೆ. ಪುರಸಭೆ, ಹೊಲಗಳ ರೈತರು ಕರೆ ಕಳಿಸಿದಲ್ಲಿ ಮಾತ್ರ ಇವರು ಬಂದು ಮಂಗಗಳನ್ನು ಹಿಡಿಯುತ್ತಾರೆ.
                             ಹೊಟ್ಟೆ ಹೊರೆಯಲು ಎಷ್ಟೊಂದು ವಿಧದ ಪ್ರಾಮಾಣಿಕ ಮಾರ್ಗಗಳಿವೆಯಲ್ಲ ಎಂದೆನಿಸದೇ ಇರಲಿಲ್ಲ. ಎಲ್ಲೆಂದರಲ್ಲ ಜಿಗಿಯುವ ಮಂಗಗಳನ್ನೇನೋ ಹಣ ಕೊಟ್ಟು ಹಿಡಿಸಿ ದೂರ ಬಿಡುವ ವ್ಯವಸ್ಥೆ ಇದೆ ನಿಜ, ಆದರೆ ಮನುಷ್ಯನ ಮನಸ್ಸೆಂಬ ಮಂಗವನ್ನು ಹಿಡಿಯಲು ಯಾರಿಗೆ ಹೇಳುವುದು ಎಂದು ಯೋಚಿಸತೊಡಗಿದೆ.


Sunday, March 30, 2014

ಇಲ್ಲೊಂದು ಬ್ಯಾಗ್ ವರ್ಮ್(ಸಂಚಿ ಹುಳು)


                     ಬೆಳಿಗ್ಗೆ ಮನೆಯ ಮುಂದಿರುವ ಪುಟ್ಟ ತೋಟದಲ್ಲಿ ನೀರು ಹಾಯಿಸುತ್ತಿದ್ದೆ. ಗಿಡಗಳ ಮಧ್ಯೆ ಏನೋ ಹೊಲಸು ಕುಳಿತಂತೆನಿಸಿತು. ಅದನ್ನು ತೆಗೆದು ಆಚೆ ಬಿಸಾಡಬೇಕೆಂದು ಕೈಗೆತ್ತಿಕೊಂಡೆ. ಯಾಕೋ ಅದು ವಿಶೇಷವೆನಿಸಿತು. ಇರುವೆಗಳ ರುಂಡ, ಮುಂಡ, ವಿವಿಧ ಎಳೆಗಳ ಗುಂಪೆನ್ನಿಸಿ, ಇರುವೆಗಳ ಶವಗಳ್ಯಾಕೆ ಈ ಪರಿ ಮೆತ್ತಿಕೊಂಡಿವೆ ಎಂದು ಕುತೂಹಲದಿಂದ ಅದನ್ನು ಮನೆಯ ಕಂಪೌಂಡ್ ಗೋಡೆಯ ಮೇಲಿಟ್ಟು ನೋಡಿದೆ. ಅದೊಂದು ಪುಟ್ಟ ಗೂಡೆನಿಸಿತು. ನೀರಿನ ಪೈಪನ್ನಲ್ಲೆ ಬಿಸಾಡಿ ಅದನ್ನು ಸೂಕ್ಷ್ಮವಾಗಿ ನೋಡಿದೆ. ಪುಟ್ಟ ಗೂಡಿನೊಳಗಿನಿಂದ ನಿಧಾನವಾಗಿ ಹುಳುವಿನ ತಲೆ ಹೊರಬಂತು, ಹಾಗೇ ಮೆಲ್ಲನೆ ಗೂಡು ಮುಂದೆ ಸರಿಯತೊಡಗಿದಾಗ ಅಚ್ಚರಿಯೆನಿಸಿತು. ತನ್ನ ಮೈಮೇಲೆ ವಿವಿಧ ಇರುವೆ ಶವಗಳ ತುಣುಕುಗಳು, ಎಳೆಗಳನ್ನು ಹೊತ್ತ ಆ ಹುಳು ಪೂರ್ತಿಯಾಗಿ ಹೊರಬರದೇ ಗೂಡಿನ ಸಮೇತವೇ ತೆವಳತೊಡಗಿತು. ಬೇಗನೇ ಮನೆಯೊಳಗಿನಿಂದ ಕ್ಯಾಮೆರಾ ತಂದು ಕ್ಲಿಕ್ಕಿಸತೊಡಗಿದೆ. ತೆವಳುತ್ತ ಹೊರಟ ಹುಳು ಆಕಸ್ಮಿಕವಾಗಿ ಗೋಡೆಯಿಂದ ಜಾರಿತು. ಗೂಡು ಕೆಳಗೆ ನೇತಾಡುತ್ತಿದ್ದರೂ, ಅದರ ಭಾರವನ್ನೆಲ್ಲ ಹೊತ್ತ ಹುಳು ಗೋಡೆಯ ಅಂಚಿಗೆ ಅಂಟಿಕೊಂಡೇ ಇತ್ತು. ಮುಂದೆ ಅದೇನು ಮಾಡಬಹುದೆಂಬ ಕುತೂಹಲದಿಂದ ಅದನ್ನು ಎತ್ತಿಡದೇ ಗಮನಿಸಿದೆ. ಕ್ಯಾಮೆರಾದ ಕಣ್ಣು ಮಿನುಗುತ್ತಲೇ ಇತ್ತು. ಹರ ಸಾಹಸ ಮಾಡಿದ ಪುಟ್ಟ ಹುಳು ತನ್ನೆಲ್ಲ ಬಲವನ್ನು ಹಾಕಿ ತನ್ನೊಂದಿಗೆ ಪುಟ್ಟ ಗೂಡನ್ನೂ ಮೇಲೆಳೆದುಕೊಂಡಿತು. ಅಬ್ಬಾ! ಎಂಥ ಸಾಹಸ. ಮತ್ತೆ ಹುಳು ಮುಂದುವರೆಯತೊಡಗಿದಾಗ, ಇದು ಏನು? ಯಾಕೆ ಹೀಗೆ? ಎಂ ಪ್ರಶ್ನೆ ತಲೆ ತಿನ್ನತೊಡಗಿತು. 

F PÀÄjvÀÄ ªÀiÁ»w PÀ¯ÉºÁQzÁUÀ, EzÀ£ÀÄß ¨ÁåUï ªÀªÀiïð (¸ÀAa ºÀļÀÄ JAzÀÄ £Á¤lÖ ºÉ¸ÀgÀÄ)  JAzÀÄ QÃl¯ÉÆÃPÀzÀ vÀdÕgÀÄ UÀÄgÀÄw¸ÀÄvÁÛgÉ. ¥ÉìöÊQqÁ UÀÄA¦£À EzÀ£ÀÄß amÉÖ, ¥ÀvÀAUÀUÀ¼À PÀÄlÄA§zÀ°è ªÀVÃðPÀj¸À¯ÁVzÉ. amÉÖ, ¥ÀvÀAUÀUÀ¼À ªÉÆmÉÖUÀ¼ÀÄ ¯ÁªÁð ºÀAvÀzÀ°èzÁÝUÀ vÀªÀÄä ªÉÄʸÀÄvÀÛ UÀÆqÀ£ÀÄß ¤«Äð¹PÉƼÀÄîªÀAvÉAiÉÄÃ, F ¥Àæ¨sÉÃzÀzÀ ºÀļÀÄUÀ¼ÀÄ vÀªÀÄä ªÉÄʸÀÄvÀÛ ¥ÀÅlÖ aîªÀ£ÀÄß £ÉÃAiÀÄÄÝPÉƼÀÄîvÀÛªÉ. EzÀPÉÌ EAxÀzÉà ¸ÁªÀÄVæ ¨ÉÃPÉA¢®è. ªÀÄtÄÚ, G¸ÀÄPÀÄ, MtVzÀ J¯É, EgÀĪÉAiÀÄAvÀºÀ fëUÀ¼À vÀÄtÄPÀÄUÀ¼ÀÄ K£ÀÄ ¨ÉÃPÁzÀgÀÆ £ÀqÉ¢ÃvÀÄ. vÀªÀÄä gÉõÉäAiÀÄAvÀºÀ £ÀAiÀĪÁzÀ eÉÆ°è¤AzÀ UÀÆqÀ£ÀÄß ºÉuÉzÀÄPÉÆAqÀÄ fêÀ£À¥ÀÇwð CzÀgÀ¯Éèà fë¸ÀÄvÀÛªÉ. EªÀÅUÀ¼À UÀÆqÀÄUÀ¼ÀÄ 1 ¸ÉA.«ÄÃ.¤AzÀ 15 ¸ÉA.«Äà GzÀÝ«gÀÄvÀÛªÉ. ºÀļÀÄ«£À UÁvÀæ ºÉZÁÑzÀAvÉ®è UÀÆqÀÄ CxÀªÁ aîªÀ£ÀÄß zÉÆqÀØzÀÄ ªÀiÁrPÉƼÀÄîvÀÛzÉ. EªÀÅUÀ¼À DºÁgÀ VqÀzÀ J¯ÉUÀ¼ÉÃ. »ÃUÁV VqÀzÀ PÁAqÀPÉÆÌÃ, J¯ÉUÉÆà eÉÆÃvÀÄ©¢ÝgÀÄvÀÛªÉ. CxÀªÁ UÉÆÃqÉ, §AqÉUÀ½UÀÆ eÉÆÃvÀÄ©¢ÝgÀĪÀÅzÀ£ÀÄß PÁt§ºÀÄzÀÄzï. xÀlÖ£É £ÉÆÃrzÁUÀ K£ÉÆà ºÉÆ®¸ÀÄ J¤¸À§ºÀÄzÁzÀgÀÆ, ¥ÀQëUÀ½AzÀ gÀPÀëuÉ ¥ÀqÉAiÀÄ®Æ EzÀÄ ¸ÀÄ®¨sÀ G¥ÁAiÀĪÁVzÉ.  ºÉtÄÚ ºÀļÀÄ CzÉà aîzÀ°èAiÉÄà MAzÀÄ ¸À®PÉÌ 500jAzÀ 1,600gÀªÀgÉUÀÆ ªÉÆmÉÖUÀ¼À¤ßqÀÄvÀÛzÉ. PÉ®ªÀÅ ¥Àæ¨sÉÃzÀUÀ¼À°è UÀAqÀÄ ºÀļÀÄ«£ÉÆA¢UÉ PÀÆrzÁUÀ ºÉtÄÚ ªÉÆmÉÖ¬ÄlÖzÉ, PÉ®ªÉÇAzÀPÉÌ UÀAqÀÄ ºÀļÀĪÀ£ÀÄß PÀÆqÀzÉAiÀÄÆ ªÉÆmÉÖUÀ¼À¤ßqÀ§ºÀÄzÀÄ. ¨ÁåUï ªÀªÀiïìðUÀ¼À°è EAxÀzÉà jÃwAiÀĪÁVgÀ¨ÉÃPÉA¢®è, ¸ÀtÚ PÀrØUÀ½AzÀ UÀÆqÀÄ ¤«Äð¹PÉƼÀÀÄzÀÄ, CxÀªÁ MtVzÀ J¯ÉUÀ½AzÁVgÀ§ºÀÄzÀÄ, »ÃUÉ £Á£Á «zsÀUÀ½ªÉ. K£ÉAzÀgÀÆ ºÀļÀÄUÀ¼À ¯ÉÆÃPÀªÉà CzÀÄãvÀ C®èªÉ?
(ಲೇಖನ ಸುಧಾದಲ್ಲಿ ಪ್ರಕಟಗೊಂಡಿದೆ)


Tuesday, March 11, 2014

ಸಾಸಿವೆ ತಂದವಳು-ಕೃತಿ ಪರಿಚಯ

                         ಮಾರಕ ಕಾಯಿಲೆಗಳೊಂದಿಗೆ ಹೋರಾಡಿ ದುರಂತ ಕತೆಯಾಗುವುದನ್ನು ಸಿನಿಮಾಗಳಲ್ಲಿ ನೋಡುತ್ತೇವೆ. ಅದು ಸಿನಿಮಾ ಯಶಸ್ವಿಯಾಗಲೆಂಬ ನಿರ್ದೇಶಕರ ಸೂತ್ರವೂ ಹೌದು. ಆದರೆ ಹಾಗೆ ಹೋರಾಡಿ ಯಶಸ್ಸು ಸಾಧಿಸಿದವರು ನಿತ್ಯ ಬದುಕಿನಲ್ಲಿದ್ದಾರಾದರೂ ಅವರು ಅದನ್ನು ಎಲ್ಲೂ ದಾಖಲಿಸುವುದು ಸಾಧ್ಯವಾಗುವುದಿಲ್ಲ. ದಾಖಲಾಗಲು ಅವರು ಮತ್ತಷ್ಟು ಶ್ರಮಪಡಬೇಕಾಗುವುದು. ಹೀಗಾಗಿ ಮಾರಕ ಕಾಯಿಲೆಯೊಂದಿಗೆ ಅಕ್ಷರಶ: ಬದುಕಿ ಅಕ್ಷರಗಳ ರೂಪದಲ್ಲಿ ದಾಖಲಾಗಿರುವುದು ವಿರಳವೆಂದೇ ಹೇಳಬಹುದು.
                      ಈ ರೀತಿಯಲ್ಲಿ ಕ್ಯಾನ್ಸರ್ ಎಂಬ ಮಾರಕ ಕಾಯಿಲೆಯ ವಿರುದ್ಧ ಹೋರಾಡಿ ಅದರೊಂದಿಗೇ ಬದುಕನ್ನು ಹಂಚಿಕೊಂಡು ಅದಮ್ಯ ಉತ್ಸಾಹದಿಂದ ಹೊಸ ಜನ್ಮ ಪಡೆದವರು ಭಾರತಿ ಬಿ.ವಿ.ಯವರು. ಅವರ ಹೋರಾಟದ ಕೃತಿಯೇ ಸಾಸಿವೆ ತಂದವಳು. ಬುದ್ಧ ಸಾವಿಲ್ಲದ ಮನೆಯ ಸಾಸಿವೆ ತೆಗೆದುಕೊಂಡು ಬಾ ಎಂದು ದು:ಖತಪ್ತ ತಾಯಿಗೆ ಹೇಳಿದಂತೆಯೇ, ಭಾರತಿಯವರು ಸಾವಿನ ಕದ ತಟ್ಟಿ ಎದುರಿಸಿ, ಅಲ್ಲಿಂದಲೇ ಸಾಸಿವೆ ತಂದ ಕಥಾನಕ ಸಾಸಿವೆ ತಂದವಳು.
                         ಈ ಕೃತಿಯಲ್ಲಿ ಸಾವಿಗೆ ಸಮೀಪದ ಕ್ಯಾನ್ಸರ್‌ನೊಂದಿಗಿನ ಹೋರಾಟವಿದೆ, ಕಾಯಿಲೆಯನ್ನು ಲಘುವಾಗಿ ಪರಿಗಣಿಸಿ ಉತ್ಸಾಹ ಚಿಮ್ಮಿಸುವ ಆಶಾದಾಯಕ ಭಾವಗಳಿವೆ, ಕಾಯಿಲೆಯೊಂದಿಗೆ ಮಲಗಿದ್ದಾಗಲೂ ಹಾಸ್ಯಪ್ರಜ್ಞೆಯಿದೆ, ಆಸ್ಪತ್ರೆಗೆ ಹೋದಾಕ್ಷಣ ಉಂಟಾಗುವ ಆಧ್ಯಾತ್ಮದ ಹೊಳಹುಗಳಿವೆ, ಎಲ್ಲಕ್ಕೂ ಮಿಗಿಲಾಗಿ ಕಾಯಿಲೆಯ ಬಗ್ಗೆ ಸಂಪೂರ್ಣ ವಿವರಗಳಿವೆ. 
                        ಭಾರತಿಯವರು ಕ್ಯಾನ್ಸರ್ ಎಂದರೇನು, ಅದರ ಚಿಕಿತ್ಸೆ, ಚಿಕಿತ್ಸೆಯ ಹಂತಗಳು, ಒಬ್ಬ ರೋಗಿಯ ಮಾನಸಿಕ ತೊಳಲಾಟ ಎಲ್ಲವನ್ನೂ ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದಾರೆ. ವಿಶೇಷವೆಂದರೆ, ಕೇವಲ ಕಾಯಿಲೆಯ ಬಗ್ಗೆಯೇ ಮಾಹಿತಿ ನೀಡುತ್ತ ಹೋದಲ್ಲಿ, ಅಥವಾ ತಮ್ಮ ನೋವನ್ನಷ್ಟೇ ಇಲ್ಲಿ ದಾಖಲಿಸಲು ಯತ್ನಿಸಿದ್ದಲ್ಲಿ ಓದುಗರಿಗೆ ಅಥವಾ ಸಹೃದಯರಿಗೆ ಅದೊಂದು ವರದಿಯಾಗುತ್ತಿತ್ತಷ್ಟೇ. ಆದರೆ ಲೇಖಕಿ ತಮ್ಮ ನೋವಿನಲ್ಲೂ ಸಹೃದಯರಿಗೆ ಕಾಯಿಲೆ, ರೋಗಿ, ತೊಳಲಾಟ ಎಲ್ಲವುಗಳನ್ನು ಹೇಳುತ್ತಲೇ ವರದಿಯಾಗದಂತೆ ಎಚ್ಚರವಹಿಸಿ, ಓದುವಿಕೆಯ ಓಘಕ್ಕೆ ತಡೆಯಾಗದಂತೆ ಅಲ್ಲಲ್ಲಿ ನವುರಾದ ಹಾಸ್ಯ ಪ್ರಸಂಗಗಳೊಂದಿಗೆ ಕೃತಿ ರಚಿಸಿರುವುದು ಅದ್ಭುತ. ಎಲ್ಲ ಇದ್ದೂ, ಏನೊಂದು ಇಲ್ಲದಂತೆ ಹಲುಬುವವರಿಗೆ, ಸಣ್ಣ ಪುಟ್ಟ ಕಾಯಿಲೆಗಳಿಗೂ ಭಯ ಬೀಳುವವರಿಗೆ ಸ್ಫೂರ್ತಿದಾಯಕ ಈ ಕೃತಿ. ಕ್ಯಾನ್ಸರ್‌ಪೀಡಿತರಿಗಂತೂ ಇದೊಂದು ಮನೋಬಲ ತುಂಬುವ ಕೈಪಿಡಿಯೆಂದೇ ಹೇಳಬಹುದು. 
                     ಕಾಯಿಲೆಯ ಸಂದರ್ಭದಲ್ಲಿ ಲೇಖಕಿಗೆ ಎಂತಹ ವಿಚಾರಗಳು ಅನುಭವವೇದ್ಯವಾಗುತ್ತವೆಂಬುದಕ್ಕೆ ಒಂದೊಂದು ಸಲ ಎಷ್ಟು ವರ್ಷ ಬದುಕಿರುತ್ತೇನೆ ಅಂತೆಲ್ಲ ಪ್ರಶ್ನೆ ಏಳುತ್ತದೆ. ಆಗ ನನಗೆ ನಾನೇ ಹೇಳಿಕೊಳ್ಳುತ್ತೇನೆ. ಯಾರಿಗೆ ಗೊತ್ತು ಹೇಳು ಎಲ್ಲಿಯವರೆಗೆ ಇರುತ್ತೇವೆ ಅಂತ? ನಿನಗೆ ಮಾತ್ರವಲ್ಲ, ಜಗತ್ತಿನ ಯಾವ ಖಾಯಿಲೆಯೂ ಇಲ್ಲದ ಅಪ್ಪಟ ಆರೋಗ್ಯವಂತನಿಗೆ ಕೂಡಾ ಈ ಪ್ರಶ್ನೆ ಹಾಕಿದರೆ ಅವನ ಉತ್ತರ ಗೊತ್ತಿಲ್ಲ ಅನ್ನುವುದೇ ಆಗಿರುತ್ತದಲ್ಲವೇ? ಬದುಕಿನ ಮೊಹಕತೆ ಮತ್ತು ಅರ್ಥ ಅಡಗಿರುವುದೇ ಈ ಅನಿಶ್ಚಿತತೆಯಲ್ಲಲ್ಲವೇ? ಅಂತ. ಯಾವ ಯಾವ ಜ್ಞಾನಿಗೂ ಸಾವು ಯಾವಾಗ ಅನ್ನುವುದು ಗೊತ್ತಿರೋದಿಲ್ಲ. ಹಾಗೆಯೇ ನನಗೂ ಕೂಡ... ಹಾಗಾಗಿ ನಾನು ಎಲ್ಲಿಯವರೆಗೆ ಬದುಕಿರುತ್ತೇನೋ ಅಲ್ಲಿಯವರೆಗೆ ಬದುಕಬೇಕು ಅಂತ ತೀರ್ಮಾನಿಸಿಬಿಟ್ಟಿದ್ದೇನೆ.......I want live my life till I am alive....
                                  ಕೃತಿ ಆರಂಭಗೊಳ್ಳುವುದು ಆಪರೇಷನ್ ಥಿಯೇಟರ್‌ನಿಂದ. ಅಲ್ಲಿ ಕ್ಯಾನ್ಸರ್ ಗಡ್ಡೆಯ ಶಸ್ತ್ರ ಚಿಕಿತ್ಸೆಯ ನಂತರ ತಮಗೆ ೪ನೇ ಬೆಡ್‌ನ ರೋಗಿ ಎಂಬ ಹೊಸ ನಾಮಧೇಯ ಬಂದಾಗಿನಿಂದ ತಮ್ಮ ಕಾಯಿಲೆಯ ಹಿಂದಿನ ಅನುಭವಗಳ ಸುರುಳಿಯನ್ನು ಬಿಚ್ಚಿಡುತ್ತ ಹೋಗುತ್ತಾರೆ. ಪ್ರತಿ ಕಾಯಿಲೆಗೂ ಭಯ ಬೀಳುವ ಮನೋಭಾವ ಹೊಂದಿದ ಲೇಖಕಿ, ಯಾವುದೇ ಕಾಯಿಲೆಯ ಬಗ್ಗೆ ಪತ್ರಿಕೆಯಲ್ಲಿ ಓದಿದರೂ ಅದು ತಮಗೇ ಬಂದಿದೆ ಎಂದು ಭೀತಿಗೊಳ್ಳುವ ಫೋಬಿಯಾ ಹೊಂದಿರುತ್ತಾರೆ. ವಿಚಿತ್ರವೆಂದರೆ ಕೆಮ್ಮು, ನೆಗಡಿಗೂ ಅಂಜುವ ಸ್ಥಿತಿಯಲ್ಲಿದ್ದ ಲೇಖಕಿ ಕ್ಯಾನ್ಸರ್ ವಿರುದ್ಧ ಹೋರಾಡಲು ಎಷ್ಟೊಂದು ಮಾನಸಿಕ ಸ್ಥೈರ್ಯವನ್ನು ಪಡೆದುಕೊಳ್ಳುತ್ತಾರೆಂದರೆ, ಶಸ್ತ್ರಚಿಕಿತ್ಸೆಯಾದ ನಂತರ ಕೆಲವೇ ದಿನಗಳಲ್ಲಿ ಗಾಯದ ಕೊಳಕು ಹರಿದುಹೋಗಲೆಂದು ಆಸ್ಪತ್ರೆಯವರು ದೇಹಕ್ಕೆ ಜೋಡಿಸಿದ್ದ ಪೈಪ್ ಮತ್ತು ಬಾಟಲಿಯನ್ನು ಹಿಡಿದುಕೊಂಡೇ ಆಟೊ ಹತ್ತಿ ಗೆಳತಿಯರ ಮನೆಗೆ ಹೋಗುತ್ತಾರೆಂದರೆ, ಅವರ ಮನೋಸ್ಥೈರ್ಯವನ್ನು ಊಹಿಸಿಕೊಳ್ಳಬಹುದು. ಅದಕ್ಕೆಂದೇ ಆಸ್ಪತ್ರೆಯ ನರ್ಸ್‌ಗಳು ಬಾಟಲ್ ಸಮೇತ ಆಟೊ ಹತ್ತಿ ಹೋದವರಾ? ಎಂದೆ ಇವರನ್ನು ಗುರುತಿಸುತ್ತಿದ್ದರಂತೆ. 
                         ಕ್ಯಾನ್ಸರ್ ಕಾಯಿಲೆಗೂ ಮುಂಚೆ ಸಣ್ಣ ಕಾಯಿಲೆಗಳಿಗೂ ಭಾರತಿಯವರು ಎಷ್ಟು ಗಾಬರಿಯಾಗುತ್ತಿದ್ದರೆಂದರೆ, ಅವರ ಪತಿಯ ಸಂಪಾದಿಸಿದ ದುಡ್ಡಲ್ಲಿ ಅರ್ಧದಷ್ಟು ಬರೀ ಡಾಕ್ಟರ್‌ಗಳಿಗೆ ಟೆಸ್ಟ್‌ಗಳಿಗೇ ಖರ್ಚಾಗುತ್ತಿತ್ತಂತೆ. ಅಷ್ಟೇ ಅಲ್ಲದೆ ಮುಂದೆ ನೋಡಿ ನಾನು ಸತ್ತು ಹೋದರೆ ನೀನು ಮತ್ತೆ ಮದುವೆ ಮಾಡಿಕೊಳ್ತೀಯಾ? ನನ್ನ ಮಗನ್ನ ಮಾತ್ರ ಚೆನ್ನಾಗಿ ನೋಡ್ಕೋ ಪ್ಲೀಸ್ ಎಂಬ ಮೆಲೋಡ್ರಾಮಾ ಸೀನ್‌ಗಳು ಬೇರೆ! ಒಂದು ದಿನ ರೋಸಿ ಹೋಗಿ ದಿನಾ ಸತ್ತೊಗೀನಿ, ಸತ್ತೋಗ್ತೀನಿ ಅಂತ ಹೆದರುತ್ತಾ ಬಾಳಿ ಅದೇನು ಸಾಧಿಸಿದ್ದೀಯಾ? ಈ ಥರ ಬಾಳೋದರ ಬದಲು ಸತ್ತು ಹೋಗೋದೇ ವಾಸಿ ಅಂದುಬಿಟ್ಟಿದ್ದ. ಅಂಥಾ ಚಿತ್ರಹಿಂಸೆ ಕೊಟ್ಟುಬಿಟ್ಟಿದ್ದೆ ಅವನಿಗೆ ಎಂದು ಹೇಳುತ್ತಾರೆ. 
                                    ವಿಧಿ, ಹಣೆಬರಹ ಅಂದರೇನು ಅಂತ ಲೇಖಕಿಗೆ ಕೇಳಿ ಹೇಳುತ್ತಾರೆ. ರೋಗ ಇಲ್ಲದಾಗ ಇದೆ, ಇದೆ ಅಂತ ಪರೀಕ್ಷೆ ಮಾಡಿಸಿಕೊಂಡ ನಾನು ಕ್ಯಾನ್ಸರ್ ನಿಜಕ್ಕೂ ನನ್ನೊಳಗೆ ಕಾಲಿಡುವಷ್ಟರಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವುದನ್ನೇ ಬಿಟ್ಟಿದ್ದೆ. ಇದನ್ನೇ ಇರಬೇಕು ಎಲ್ಲರು ವಿಧಿ, ಹಣೆಬರಹ ಅಂತೆಲ್ಲ ಕರೆಯುವುದು......
ಶಸ್ತ್ರ ಚಿಕಿತ್ಸೆಯ ನಂತರ ತಮ್ಮ ಚಿಕಿತ್ಸೆಯ ವಿವರವನ್ನು ಈ ರೀತಿ ಹೇಳುತ್ತಾರೆ  ನನಗೆ ೮ ಕೀಮೋ ಮತ್ತು ೩೩ ರೇಡಿಯೇಷನ್ ಬೇಕಿತ್ತು. ಕೀಮೋ ಪ್ರತಿ ೨೧ ದಿನಕ್ಕೊಂದು. ಅದಾದ ಮೇಲೆ ವಾರಕ್ಕೆ ೫ ದಿನದ ಹಾಗೆ ಆರೂವರೆ ವಾರ ರೇಡಿಯೇಷನ್! ಮನಸ್ಸು ಲೆಕ್ಕ ಹಾಕಿತು. ಅಂದರೆ ೧೬೮+೪೫ ಅಂದರೆ ೨೧೩ ದಿನಗಳು. ಅಂದರೆ ನೇರಾ ನೇರ ಬದುಕಿನ ೭ ತಿಂಗಳು. ಮಧ್ಯೆ ಮಧ್ಯೆ ಗ್ಯಾಪ್ ಎಲ್ಲ ಸೇರಿಸಿದರೆ ಹೆಚ್ಚೂ ಕಡಿಮೆ ೯ ತಿಂಗಳು. ೨೯ ದಿನಗಳ ಕಾಲ ಸ್ನಾನ ಮಾಡದ ಸ್ಥಿತಿಯನ್ನು ಹೇಳುವ ರೀತಿಯೆಂದರೆ, ಬದುಕಿನಲ್ಲಿ ನಮಗೆ ಯಾವುದರ ಬೆಲೆಯೂ ಇರುವಾಗ ಗೊತ್ತಾಗೋದೇ ಇಲ್ಲ. ಅದು ಇಲ್ಲದಾದಾಗಿನ ಕಾಲದಲ್ಲಿ, ಇದ್ದಾಗ ಎಷ್ಟು ಚೆಂದವಿತ್ತು ಅಂತ ಅನಿಸುತ್ತೆ. ಸ್ನಾನವೊಂದರ ಬೆಲೆ ಅವತ್ತು ಗೊತ್ತಾಯ್ತು. ಇಂತಹ ಮಾತುಗಳೇ ಓದುಗರನ್ನು ಹಿಡಿದಿಡುವುದು. 
                                   ಕೀಮೋ ಥೆರೆಪಿಯ ನೋವನ್ನು ಲೇಖಕಿ ಶಬ್ದಗಳ ರೂಪದಲ್ಲಿ ಹಿಡಿದಿಡಲು ಯತ್ನಿಸುತ್ತಾರೆ. ನಾನು ಹುಟ್ಟಿದಾಗಿನಿಂದ ಎಂದೂ ಅನುಭವಿಸದಂಥ ನೋವು ಅದು. ಈ ನೋವಿನ ಮುಂದೆ ಹೆರಿಗೆ ನೋವು ಏನೇನೂ ಅಲ್ಲ ಅನ್ನಿಸಿಬಿಟ್ಟಿತು. ಈ ನೋವು ದೇಹವನ್ನು ಚಪಾತಿ ಹಿಟ್ಟನ್ನು ಕಲೆಸಿದ ನಂತರ ನಾದುತ್ತೀವಲ್ಲ ಹಾಗೆ ನಾದಿಬಿಟ್ಟಿತು. ಇಂತಹ ಸ್ಥಿತಿಯಲ್ಲಿಯೇ ಮೂತ್ರವಿಸರ್ಜನೆಗೆ ಹೋಗಲೂ ಮನಸನ್ನು ಅರ್ಧಗಂಟೆ ಮೋಟಿವೇಟ್ ಮಾಡಿಕೊಳ್ಳಬೇಕು ಎಂದು ತಿಳಿಸುತ್ತಾರೆಂದರೆ ಕೀಮೋ ಥೆರೆಪಿಯಲ್ಲಿ ರೋಗಿಗಳು ಅನುಭವಿಸುವ ನೋವು ಎಂಥದ್ದೆಂದು ತಿಳಿಯಬಹುದು. ಕೀಮೋ ಥೆರೆಪಿಯಿಂದ ತಲೆಕೂದಲು, ಹುಬ್ಬು, ದೇಹದ ಎಲ್ಲ ಕೂದಲುಗಳೂ ಉದುರಿಹೋಗುವ ಹಿಂಸೆಯನ್ನು ಲೇಖಕಿ ವಿವರಿಸುತ್ತಾರೆ. ಹಾಗೆಯೇ ಅದನ್ನು ಎದುರಿಸಲು ತಮ್ಮಷ್ಟಕ್ಕೆ ತಾವೇ ಮನಸ್ಸನ್ನು ಬಲಗೊಳಿಸಿಕೊಂಡ ಪ್ರಸಂಗಗಳನ್ನೂ ಹೇಳುತ್ತಾರೆ.  ಕೀಮೋ ಥೆರೆಪಿಯಲ್ಲಿದ್ದಾಗ ಯಾವುದೇ ಸಾಂಕ್ರಾಮಿಕ ಕಾಯಿಲೆ ಬರದಂತೆ ಎಚ್ಚರವಹಿಸುವುದು ರೋಗಿಯ ಆದ್ಯ ಕರ್ತವ್ಯ. ಲೇಖಕಿ ಸುಮ್ಮನೆ ಕುಳಿತುಕೊಳ್ಳುವವರಲ್ಲವಲ್ಲ. ಹೀಗಾಗಿ ಮಾರ್ಕೆಟ್‌ಗೆ ಹೋದಾಗ ಮೂಗಿಗೆ ಮಾಸ್ಕ್ ರೀತಿಯಲ್ಲಿ ದುಪ್ಪಟ್ಟಾ ಹಾಕಿಕೊಂಡು ಹೋಗುತ್ತಿದರಂತೆ. ಯಾರಾದರೂ ಸೀನಿದರೆ, ಕೆಮ್ಮಿದರೆ ಬಾಂಬ್ ಸಿಡಿದವರಂತೆ ಅಲ್ಲಿಂದ ಓಡಿಹೋಗುತ್ತಿದ್ದರಂತೆ. 
                                   ಥೆರೆಪಿಯ ಸಂದರ್ಭದಲ್ಲಿ ತಮ್ಮ ತಲೆಕೂದಲು ಉದುರಿ ಉಳಿದವುಗಳನ್ನು ತೆಗೆಸಿದಾಗ ಉಂಟಾಗುವ ಭಾವವೆಂದರೆ ಸನ್ಯಾಸತ್ವ ಸ್ವೀಕರಿಸುವ ಮುಂಚೆ ಯಾಕೆ ತಲೆಯಲ್ಲಿನ ಕೂದಲನ್ನು ತೆಗೆಸುತ್ತಾರೆ ಅನ್ನೋದು ಕೂಡ ಅವತ್ತು ಅರ್ಥವಾದ ಹಾಗೆ ಅನ್ನಿಸಿತು. ನನ್ನಂಥ ಲೌಕಿಕ ಬದುಕಲ್ಲಿ ಮುಳುಗೇಳುವ ಹೆಣ್ಣಿಗೇ ಕಳೆದುಕೊಂಡ ಕೂದಲು ಇಷ್ಟೆಲ್ಲ ನಿರ್ಮೋಹತ್ವ ತರಬಹುದಾದರೆ, ಇನ್ನು ಸನ್ಯಾಸ ಅಪ್ಪಲು ಹೊರಟವರಿಗೆ? ಸುಮ್ಮನೆ ಕೂತ ಘಳಿಗೆಗಳಲ್ಲಿ ಏನೆಲ್ಲ ಜಿಜ್ಞಾಸೆಗಳು, ಜ್ಞಾನೋದಯಗಳು, ಸಾಕ್ಷಾತ್ಕಾರಗಳು.....! ಎಂದು ಒಂದೆಡೆ ಹೇಳಿದರೆ, ಕೂದಲನ್ನು ಕಳೆದುಕೊಂಡ ತಕ್ಷಣ ಅವತ್ತು ಯಾಕೋ ಎಲ್ಲ ಮೋಹ-ಬಂಧನ ಕಳೆದುಕೊಂಡ ಅನುಭವ ಮನಸ್ಸಿಗೆ. ಯಾವುದೂ ನನ್ನದಲ್ಲ. ಎಲ್ಲ... ಎಲ್ಲ ಕ್ಷಣಗಳು ಕಾಲಕ್ಕೆ ಸೇರಿದ್ದು. ಈ ಕ್ಷಣಗಳು ಕೂಡ ಕಾಲದ ಬುಟ್ಟಿಯಲ್ಲಿರುತ್ತವೆ. ನಮಗೆ ಅಂತ ಸುಮ್ಮನೆ ಒಂದು ಹಿಡಿ ಹಂಚುತ್ತದೆ. ಆಯಾ ದಿನಕ್ಕೆ ಬಂದ ಹಿಡಿಯಲ್ಲಿನ ಕ್ಷಣಗಳನ್ನು ಸುಖಪಟ್ಟು, ದು:ಖಿಸಿ ಬಿಟ್ಟು ಮುಗಿಸಬೇಕು ಅನ್ನಿಸುತ್ತದೆ. ಹೀಗೆ ತಮಗೆ ಅನಿಸಿದ್ದನ್ನು ನಿರಾತಂಕವಾಗಿ, ನಿರಾಳವಾಗಿ ಹೇಳಿಕೊಂಡು ಹೋಗುವುದರಿಂದಲೇ ಕೃತಿ ಆತ್ಮೀಯವೆನಿಸುತ್ತದೆ.
                             ನಾವೆಲ್ಲರೂ ನೆನಪಿಡಲೇಬೇಕಾದ ಒಂದು ಮಾತನ್ನು ಭಾರತಿ ಹೇಳುತ್ತಾರೆ ಮುಂಚೆ ನಾನು ಅಂದುಕೊಂಡಿದ್ದೆ ನಾನು ೧೦೦ ವರ್ಷಕ್ಕಿಂತ ಒಂದು ದಿನ ಮುಂಚೆ ಕೂಡ ಸಾಯುವುದಿಲ್ಲ ಅಂತ. ಹಾಗಾಗಿ ನನ್ನ ಪ್ಲ್ಯಾನ್‌ಗಳೆಲ್ಲ ಲಾಂಗ್ ಟರ್ಮ್‌ನವಾಗಿದ್ದವು. ಈಗ ಬದುಕು ನಾನು ಅಂದುಕೊಂಡಷ್ಟು ಉದ್ದವೂ ಇಲ್ಲ ಮತ್ತು ಗ್ಯಾರಂಟಿಯೂ ಇಲ್ಲ ಅನ್ನುವುದು ಗೊತ್ತಾಗಿಹೋಯಿತು.
                           ಮಾರಣಾಂತಿಕ ಕಾಯಿಲೆಪೀಡಿತರೊಂದಿಗೆ ಹೇಗೆ ವರ್ತಿಸಬೇಕೆಂಬುದನ್ನು ಲೇಖಕಿ ಮಾರ್ಮಿಕವಾಗಿ ಹೇಳುತ್ತಾರೆ. ಸಾಧಾರಣವಾಗಿ ಕ್ಯಾನ್ಸರ್ ಮಾತ್ರವಲ್ಲ, ಯಾವುದೇ ಮಾರಣಾಂತಿಕ ಖಾಯಿಲೆ ಅಥವ ತುಂಬ ಸೀರಿಯಸ್ ಆದ ಖಾಯಿಲೆ ಇರುವವರು ದು:ಖದಲ್ಲೇ ಇರುತ್ತೇವೆ ಮತ್ತು ಸದಾ ಬಳಬಳ ಅಳುತ್ತಲೇ ಇರುತ್ತೇವೆ ಅಂತ ಜಗತ್ತು ತೀರ್ಮಾನಿಸಿಬಿಟ್ಟಿರುತ್ತದೆ. ದು:ಖಿಗಳಾದವರಿಗೆ ಸಾಂತ್ವನದ ಮಾತುಗಳನ್ನು ಆಡಲೇಬೇಕೆಂದು ತೀರ್ಮಾನಿಸಿ, ಕೆಲವು ಮುರುಕು ಡೈಲಾಗ್‌ಗಳನ್ನು ರೆಡಿ ಮಾಡಿಟ್ಟುಕೊಂಡುಬಿಟ್ಟಿರುತ್ತಾರೆ. ಇಡೀ ಜಗತ್ತಿನ ಇಂಥ ಎಲ್ಲ ಇನ್ ಸೆನ್ಸಿಟಿವ್ ಜನರಿಗೆ ಕೆಲವು ಮಾತು ಹೇಳಲೇಬೇಕು.... ನೀವು ತೋರಿಸುವ ಕನಿಕರವಿದೆಯಲ್ಲ್ ಅದು ಮೂರು ಕಾಸಿನ ಬೆಲೆಗೂ ಬಾರದ್ದು ಅನ್ನುವುದು ನಮಗೆ ಗೊತ್ತಿದೆ. ಅದನ್ನು ನೀವೂ ತಿಳಿದುಕೊಳ್ಳಿ. ಒಬ್ಬ ಕ್ಯಾನ್ಸರ್ ರೋಗಿ ತನ್ನ ರೋಗದ ಬಗ್ಗೆ ಎಲ್ಲ ಮಾಹಿತಿಯೂ ಇರುವುದರಿಂದ, ಎಲ್ಲೋ ಕಂಡ-ಕೇಳಿದ ಅಪ್ರಬುದ್ಧ ಮಾತುಗಳನ್ನು ಆಡಿಯೇ ಮುಗಿಸುತ್ತೇನೆ ಅನ್ನು ಹಟಕ್ಕೆ ಬೀಳಬೇಡಿ. ನೀವು ಅಲ್ಲಿ ಇಲ್ಲಿ ಕೇಳಿದ್ದನ್ನು ನಾವು ಸ್ವತ: ಅನುಭವಿಸಿ ಆಗಿಹೋಗಿರುತ್ತದೆ. ಹಾಗಾಗಿ ನಮಗೆ ನಿಮಗಿಂತ ಎಲ್ಲವೂ ಹೆಚ್ಚು ಗೊತ್ತಿರುತ್ತದೆ. ಯಾಕೆಂದರೆ ನಿಮಗಿದು ಬರೀ ಲೊಚ್ ಲೊಚ್ ಎನ್ನುವಂಥ ಒಂದು ರೋಚಕ ಕಥೆ. ನಮಗಿದು ಸಾವು-ಬದುಕಿನ ಪ್ರಶ್ನೆ. ಸುಮ್ಮನೆ ನಮ್ಮನ್ನು ನಮ್ಮ ಧೈರ್ಯದೊಡನೆ ಬದುಕಲು ಬಿಡಿ. ಲೇಖಕಿಯ ಮಾತುಗಳು ಕಠೋರ ಎನ್ನಿಸಿದರೂ ವಾಸ್ತವವೂ ಹೌದು. ಗಾಯದ ಮೇಲೆ ಉಪ್ಪು ಸವರುವಂತೆ ಕ್ಯಾನ್ಸರ್ ಎಂದರೆ ನೀನು ಬದುಕುವ ಹಾಗೇ ಇಲ್ಲ ಎಂಬಂತೆ ರೋಗಿಯೊಂದಿಗೆ ಮಾತಿಗೆ ತೊಡಗುವುದೇ ನಿಜಕ್ಕೂ ಮೂರ್ಖತನದ ಪರಮಾವಧಿಯೇ. ಅವರಿಗೆ ನಾವು ಕೊಡಬೇಕಾದ್ದು ಆತ್ಮಸ್ಥೈರ್ಯವೇ ಹೊರತು ಅಂಜಿದವರ ಮೇಲೆ ಕಪ್ಪೆ ಎಸೆಯುವುದಲ್ಲ.
                                        ಕೊನೆಯಲ್ಲಿ ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಳ್ಳಲು ಹೋದಾಗ, ಪಕ್ಕಕ್ಕೆ ಕುಳಿತಾಕೆ ತನ್ನ ಸಂಸಾರದ ಜಂಜಾಟಗಳ ನೋವನ್ನೆಲ್ಲ ಲೇಖಕಿಯ ಮುಂದೆ ಹೇಳಿಕೊಳ್ಳುತ್ತಾಳೆ. ಆಗ ಲೇಖಕಿ ಅದೆಲ್ಲ ಏನಾರ ಇರ್ಲಿ ಮಾರಾಯ್ತಿ ನೀನು ಬರುಕಿರ್ತೀಯ. ಅದೊಂದು ಗ್ಯಾರಂಟಿ ಇದ್ದರೆ ಮತ್ತೆಲ್ಲ ನೋವುಗಳನ್ನು ಹೇಗೋ ಸಹಿಸಿಬಿಡಬಹುದು ಗೊತ್ತಾ? ಉಹೂ, ಬದುಕಿನ, ಉಸಿರಿನ ಬೆಲೆ ನಿನಗೆ ನಿಜಕ್ಕೂ ಗೊತ್ತಿಲ್ಲ ಅಂತ ಮನಸಿನಲ್ಲೆ ಅಂದುಕೊಳ್ಳುವರು. ಮುಂದೊಂದು ದಿನ ಈ ಜುಜುಬಿ ಕ್ಯಾನ್ಸರ್‌ನಿಂದ ಜನ ಸಾಯ್ತಿದ್ರಾ..?! ಅಂತ ಜಗತ್ತು ಆಶ್ಚರ್ಯಪಡುವಂತಾಗಲಿ ಅನ್ನುವ ಪ್ರಾರ್ಥನೆ ನನ್ನದು.. ಆಮೆನ್! ಎಂದು ಕೃತಿಯನ್ನು ಪೂರ್ಣಗೊಳಿಸುತ್ತಾರೆ.
                                ಒಟ್ಟಾರೆ ಇಡೀ ಕೃತಿ ಕ್ಯಾನ್ಸರ್ ಪೀಡಿತರ ಮನೋಭಾವವನ್ನು, ತಳಮಳವನ್ನು, ಸಾವಿಗೆ ಸಮೀಪವಾದ ಸಂದರ್ಭವನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಸಾಹಿತ್ಯ ಲೋಕದಲ್ಲಿ ಆತ್ಮಕಥನ ಪ್ರಕಾರದೊಳಗಿನ ನೋವಿನ, ಹೋರಾಟದ ಕಥನವಾಗಿ ವಿಭಿನ್ನವಾಗಿ ನಿಲ್ಲುವ ಕೃತಿಯಾಗಿದೆ. ಸರಳವಾದ ಶೈಲಿ, ನಿರೂಪಣಾ ತಂತ್ರ, ಬರವಣಿಗೆಯ ಓಘ ಎಲ್ಲವೂ ಅಚ್ಚುಕಟ್ಟಾಗಿ ಮೂಡಿದೆ. 
ಕೃತಿಗೆ ನೇಮಿಚಂದ್ರ ಮುನ್ನುಡಿ ಬರೆದಿದ್ದಾರೆ. ಯು.ಆರ್.ಅನಂತಮೂರ್ತಿ ಬೆನ್ನುಡಿ ಬರೆದಿದ್ದಾರೆ.


ಕೃತಿ : ಸಾಸಿವೆ ತಂದವಳು
ಲೇಖಕಿ: ಭಾರತಿ ಬಿ.ವಿ
ಪ್ರಕಾಶನ: ಅಹರ್ನಿಶಿ ಪ್ರಕಾಶನ, ಶಿವಮೊಗ್ಗ
ಪ್ರಥಮ ಮುದ್ರಣ: ೨೦೧೩
ಬೆಲೆ: ರೂ.೧೦೦