Friday, November 15, 2013

ಹತ್ತು ನಿಮಿಷ ಸಮಯವಿದೆಯೇ ?

ನೀವು ಹೇಳುತ್ತೀರಿ - ನಮ್ಮ ಸರ್ಕಾರಕ್ಕೆ ತಾಕತ್ತೇ ಇಲ್ಲ.
ನೀವು ಹೇಳುತ್ತ್ತೀರಿ - ನಮ್ಮ ಕಾನೂನುಗಳು ಓಬಿರಾಯನ ಕಾಲದವು.
ನೀವು ಹೇಳುತ್ತೀರಿ - ನಮ್ಮ ಮುನಿಸಿಪಾಲಿಟಿಗಳು ಕಸ ಎತ್ತುವುದಿಲ್ಲ. ನೀವು ಹೇಳುತ್ತೀರಿ - ನಮ್ಮ ಫೋನ್‌ಗಳೆಲ್ಲಿ ಕೆಲಸ ಮಾಡುತ್ತವೆ? ರೈಲ್ವೆ ಬಿಡಿ, ಅದೇ ಒಂದು ದೊಡ್ಡು ಜೋಕು. ಅಂಚೆ? ಸರಿ ಎಂದಾದರೂ ಕಲಕ್ಕೆ ಸರಿಯಾಗಿ ಬಟವಾಡೆ ಮಾಡುತ್ತವೆಯೇ? ಇನ್ನು ವಿಮಾನ ಸಾರಿಗೆ - ಜಗತ್ತಿನಲ್ಲಿ ಇಂಥ ಕಳಪೆಯದು ಬೇರೊಂದಿಲ್ಲ. ನಮ್ಮ ದೇಶ ನಾಯಿಪಾಲಾಗಿ ಹೋಗಿದೆ, ಗುಂಡಿಗೆ ಬಿದ್ದು ಎಷ್ಟೊ ವರ್ಷಗಳಾಗಿ ಹೋಗಿವೆ
                     ಈ ಮಾತುಗಳನ್ನು ನೀವು ಹೇಳುತ್ತಲೇ ಹೋಗುತ್ತೀರಿ. ಆದರೆ ಇದರ ಬಗ್ಗೆ ನೀವು ಏನು ಮಾಡಿದ್ದೀರಿ? ಒಬ್ಬ ವ್ಯಕ್ತಿ ಸಿಂಗಪುರಕ್ಕೆ ಹೊರಟಿದ್ದಾನೆಂದು ಭಾವಿಸಿ, ಮಸಲಾ ನೀವೆ ಎಂದು ಇಟ್ಟುಕೊಳ್ಳೋಣ. ವಿಮಾನ ನಿಲ್ದಾಣದಿಂದ ಹೊರಬರುತ್ತೀರಿ. ಹೌದು, ಜಗತ್ತಿನಲ್ಲೇ ಅದು ಸರ್ವಶ್ರೇಷ್ಟ ವಿಮಾನ ನಿಲ್ದಾಣ. ಸಿಂಗಪುರದಲ್ಲಿ ನೀವು ರಸ್ತೆಯ ಮೇಲೆ ಸಿಗರೇಟು ತುಂಡನ್ನು ಬಿಸುಡುವುದಿಲ್ಲ. ಅಂಗದಿಗಳಲ್ಲಿ ತಿನ್ನುವುದಿಲ್ಲ. ಅವರ ನೆಲದಡಿಯ ಸಾರಿಗೆ ಸಂಪರ್ಕ ಕಂಡು ನೀವೇ ಹೆಮ್ಮೆಯಿಂದ ಹೇಳಿಕೊಳ್ಳುತ್ತೀರಿ, ಅರ್ಚರ್ಡ್ ರಸ್ತೆಯಲ್ಲಿ ಸಂಜೆ ೫ರಿಂದ ೮ರವರೆಗೆ ವಾಹನ ಚಲಾಯಿಸಲು ೫ ಡಾಲರ್ ಶುಲ್ಕವನ್ನು ನಗುನಗುತ್ತಲೇ ಕೊಡುತ್ತೀರಿ. ಅದಕ್ಕಿಂತಲೂ ಹೆಚ್ಚಿಗೆ ಸಮಯ ತೆಗೆದುಕೊಂಡಾಗ ಪಂಚಿಂಗ್ ಜಾಗಕ್ಕೇ ಬಂದು ಪಂಚ್ ಮಾಡುತ್ತೀರಿ. ನೀವು ಎಂಥ ದೊಡ್ಡ ಮನುಷ್ಯರಾದರೂ ಅಷ್ಟೇ. ಸಿಂಗಪುರದಲ್ಲಿ ತುಟಿಪಿಟಕ್ಕೆನ್ನದೆ ಇವೆಲ್ಲವನ್ನೂ ಮಾಡುತ್ತೀರಿ ಅಲ್ಲವೆ? ಇನ್ನು ದುಬೈನಲ್ಲಿ ರಂಜಾನ್ ಸಮಯದಲ್ಲಿ ಸಾರ್ವಜನಿಕವಾಗಿ ತಿನ್ನುವ ಸಾಹಸ ನೀವು ಮಾಡುವುದಿಲ್ಲ.
                        ತಿಂಗಳಿಗೆ ಹತ್ತು ಪೌಂಡ್ ಆಮಿಷ ತೋರಿಸಿ ನಾನು ಈಗ ಎಸ್.ಟಿ.ಡಿ, ಐ.ಎಸ್.ಡಿ.ಯಲ್ಲಿ ಮಾತನಾಡುವ ಟೆಲಿಫೋನಿನ ಬಿಲ್ಲನ್ನು ಬೇರೆಯವರ ನಂಬರಿಗೆ ವರ್ಗಾಯಿಸು ಎಂದು ಲಂಡನ್ನಿನಲ್ಲಿ ನೀವು ಎಂದಾದರೂ ಹೇಳಬಲ್ಲಿರಾ? ವಾಷಿಂಗ್‌ಟನ್‌ನಲ್ಲಿ ನಿಮ್ಮ ವಾಹನವನ್ನು ಗಂಟೆಗೆ ೫೫ ಕಿ.ಮೀ.ಗೂ ಹೆಚ್ಚು ಓಡಿಸುತ್ತ ಗೊತ್ತಾ ನಾನು ಯಾರ ಮಗ? ತೆಗೆದುಕೊ ನಾಲ್ಕು ಕಾಸು ಎಂದು ಪೊಲೀಸ್‌ರಿಗೆ ಎಸೆದು ಹೋಗಲು ಸಾಧ್ಯವೆ? ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಲ್ಲಿ ಎಳೆನೀರು ಕುಡಿದು ಬಿಸುಟ ಚಿಪ್ಪನ್ನು ಕಸದ ತೊಟ್ಟಿಯಲ್ಲಲ್ಲದೆ ಬೇರೆಲ್ಲಾದರೂ ನೋಡಲು ಸಾಧ್ಯವೆ? ಹಾಗಿದ್ದಲ್ಲಿ, ಆ ನೀನು ಕುರಿತು ಇನ್ನಷ್ಟು ಹೇಳಬೇಕು. ವಿದೇಶಿ ನೆಲದಲ್ಲಿ, ವಿದೇಶಿ ಕಾನೂನನ್ನು ವಿನೀತರಾಗಿ ಗೌರವಿಸಿ, ನಮ್ಮ ದೇಶಕ್ಕೆ ಬಂದೊಡನೆ ಎಲ್ಲವನ್ನೂ ಗಾಳಿಗೆ ತೂರುವುದೇಕೆ? ಈ ನೆಲ ಮುಟ್ಟುತ್ತಲೇ ಏಕೆ ಇಂಥ ಪರಿವರ್ತನೆ? ಸಿಗರೇಟು ತುಂಡುಗಳನ್ನು ಅದೇ ನೀವು ಇಲ್ಲಿ ಬಿಸುಡುವಿರಿ., ಹರಿದ ಕಾಗದಗಳನ್ನು ರಸ್ತೆಯ ಮೇಲೆ ಹಾಕುತ್ತೀರಿ. ಹೊರದೇಶದಲ್ಲಿ ಅವರ ದೇಶದವರೇ ಎಂಬಂತೆ ಶಿಸ್ತು ಪಾಲಿಸುತ್ತೀರಿ, ಭಾರತಕ್ಕೆ ಬಂದೊಡನೆ ಏಕೆ ಇಂಥ ಮನೋಭಾವ? ನನಗೆ ಮುಂಬೈನ ಮಾಜಿ ಮುನಿಸಿಪಲ್ ಕೌನ್ಸಿಲರ್ ತಿನೈಕರ್ ಅವರ ಸಂದರ್ಶನವೊಂದು ಥಟ್ಟನೆ ನೆನಪಾಗುತ್ತಿದೆ. 
                       ಶ್ರೀಮಂತರ ನಾಯಿಗಳನ್ನು ಹೇಸಿಗೆ ಉದುರಿಸಲೆಂದೇ ಬೀದಿಗೆ ಮೆರವಣಿಗೆಯಲ್ಲಿ ತರುತ್ತಾರೆ. ಅದೇ ಜನ ಮುನಿಸಿಪಾಲಿಟಿಯನ್ನು ತರಾಟೆಗೆ ತೆಗೆದುಕೊಂಡು ಈ ಮಂದಿಗೆ ಕ್ಲೀನ್ ಎಂಬುದರ ಪದವೇ ಗೊತ್ತಿಲ್ಲ ಎಂದು ಮೂಗು ಮುರಿಯುತ್ತಾರೆ. ಮುನಿಸಿಪಾಲಿಟಿಯವರೇನು ಮಾಡಬೇಕು? ಶ್ರೀಮಂತರ ನಾಯಿಗಳು ಬೀದಿಗಿಳಿಯುತ್ತಲೇ ಅವುಗಳ ಹಿಂದೆ ಪೊರಕೆ ಬುಟ್ಟಿಗಳ ಸಮೇತ ಹೋಗಬೇಕೆ?
                       ಅಮೆರಿಕದಲ್ಲಿ ನಾಯಿ ಮಾಡುವ ಹೇಸಿಗೆಯನ್ನು ಅದರ ಮಾಲೀಕರೆ ಸ್ವಚ್ಛಗೊಳಿಸಬೇಕು. ಜಪಾನ್‌ನಲ್ಲೂ ಇದೇ ಕ್ರಮವಿದೆ. ನಮ್ಮಲ್ಲಿ ಎಂದಾದರೂ ಹೀಗೆ ಮಾಡಿದ್ದೇವೆಯೆ? ಮತಗಟ್ಟೆಗೇನೋ ಟಾಕೋಠೀಕಾಗಿ ಹೋಗಿ ಮತ ಚಲಾಯಿಸಿ ಬರುತ್ತೇವೆ. ಅಲ್ಲಿಗೆ ಮುಗಿಯಿತು ಕರ್ತವ್ಯ. ಮನೆಯಲ್ಲೇ ಕುಳಿತು ಸರ್ಕಾರ ಹಾಗೆ ಮಾಡಲಿಲ್ಲ, ಹೀಗೆ ಮಾಡಲಿಲ್ಲ ಎಂದು ಆರೋಪದ ಪಟ್ಟಿ ತಯಾರಿಸುತ್ತೇವೆ. ನಮ್ಮ ಕೊಡುಗೆ ಏನು ಎಂದು ಎಂದಾದರೂ ಯೋಚಿಸಿದ್ದೇವೆಯೇ? ಎಂದಾದರೂ ಬೀದಿಯಲ್ಲಿ ಹಾರಾಡುವ ಹರಿದ ಕಾಗದದ ಚೂರನ್ನು ಕಸದ ತೊಟ್ಟಿಗೆ ಹಾಕಿದ್ದೇವೆಯೆ? ರೈಲ್ವೆ ಶೌಚಾಲಯ ತೀರ ಹೊಲಸು, ಅದನ್ನು ಸರಿಯಾಗಿ ಕ್ಲೀನ್ ಮಾಡುವುದಿಲ್ಲ ಎಂದು ಹಲುಬುತ್ತೇವೆ. ಹೊಲಸು ಮಾಡುವವರು ಯಾರು? ನಾವೇ ತಾನೆ? ಇಂಡಿಯನ್ ಏರ್ ಲೈನ್ಸ್, ಏರ್ ಇಂಡಿಯಾ ರುಚಿಕರ ಆಹಾರ ಕೊಡಬೇಕು ಎಂದು ನಿರೀಕ್ಷಿಸುತ್ತೇವೆ. ಸ್ವಲ್ಪ ಅವಕಾಶ ಸಿಕ್ಕಿದರೂ ಏನೇನನ್ನೋ ಎಗರಿಸಿಬಿಡುತ್ತೇವೆ.
                        ಇನ್ನು ಸಾಮಾಜಿಕ ಕಂಟಕಗಳಾದ ವರದಕ್ಷಿಣೆ, ಮಹಿಳೆಯರಿಗೆ ಕಿರುಕುಳ ಇಂಥ ಪ್ರಶ್ನೆ ಬಂದಾಗ ಎಲ್ಲ ಮಾಧ್ಯಮಗಳ ಮೂಲಕ ಸಾರ್ವಜನಿಕವಾಗಿ ಧ್ವನಿ ಏರಿಸಿ ಮಾತನಾಡುತ್ತೇವೆ. ಆದರೆ ಅದೇ ನಮ್ಮ ಮನೆಯಲ್ಲಿ?  ನೋಡಿ ಇಡೀ ವ್ಯವಸ್ಥೆಯೇ ಬದಲಾಗಬೇಕು, ನಾನು ನನ್ನ ಮಗನೊಬ್ಬನಿಗೆ ವರದಕ್ಷಿಣೇ ತೆಗೆದುಕೊಳ್ಳದಿದ್ದರೆ ಏನಾಯಿತು? ಜಗತ್ತು ಬದಲಾಗುತ್ತದೆಯೇ? ಎಂದು ನಿಮಗೆ ನೀವೇ ಸಾಂತ್ವನ ಮಾಡಿಕೊಳ್ಳುತ್ತೀರಿ. ಹಾಗಾದರೆ ಯಾವುದು ಈ ವ್ಯವಸ್ಥೆ? ನಾವು ನೀವು ಸೇರಿಯೇ ಅಲ್ಲವೆ ಈ ವ್ಯವಸ್ಥೆ ಎನ್ನುವುದು ರೂಪುಗೊಂಡಿರುವುದು. ನೀವು ಎಂದು ಹೇಳುವುದು ಸುಲಭ, ನಾವು ಎಂದು ಹೇಳುವುದು ಕಷ್ಟ ಅಲ್ಲವೆ?  ನಮ್ಮ ಬುಡಕ್ಕೇ ಬಂದಾಗ ಮುದುರಿ ಗೂಡು ಸೇರಿಕೊಳ್ಳುವ ಪ್ರವೀಣರು ನಾವು. 
                          ಯಾವುದೋ ಪರರಾಷ್ಟ್ರವನ್ನು ಆಗಾಗ ಎದೆಯುಬ್ಬಿಸಿ ನೆನೆಸಿಕೊಳ್ಳುತ್ತ ಅವರು ಬಂದು ನಮ್ಮದೆಲ್ಲವನ್ನೂ ರಿಪೇರಿ ಮಾಡಿಕೊಡುತ್ತಾರೆಂದು ಭ್ರಮಿಸುತ್ತ, ಅವರ ಕೈಗೆ ನಮ್ಮ ದೇಶದ ಭವಿಷ್ಯವನ್ನಿತ್ತು ಓಡಿ ಹೋಗುವ ತವಕ ನಮ್ಮದು. ಇಲ್ಲಿ ಸೋಂಭೇರಿಗಲಾಗಿ, ಅಮೆರಿಕಕ್ಕೆ ಓಡಿಹೋಗಿ, ಆದೇಶದ ವ್ಯವಸ್ಥೆಯ ಬಗ್ಗೆ ಬಾಯಿತುಂಬ ಮಾತನಾಡುತ್ತೇವೆ. ನ್ಯೂಯಾರ್ಕಿನಲ್ಲಿ ಏನೋ ಎಡವಟ್ಟು ಎಂದೊಡನೆ, ಲಂಡನ್‌ಗೆ ಓಡಿಹೋಗುತ್ತೇವೆ, ಇಂಗ್ಲೆಂಡಿನಲ್ಲಿ ನಿರುದ್ಯೋಗದ ವಾಸನೆ ಬಡಿದೊಡನೆ ಕೊಲ್ಲಿದೇಶದ ವಿಮಾನವನ್ನು ಹತ್ತಲು ಹಾತೊರೆಯುತ್ತೇವೆ. ಅಲ್ಲಿ ಕೊಲ್ಲಿ ಯುದ್ಧದಲ್ಲಿ ಸಿಕ್ಕಿಹಾಕಿಕೊಂಡರೆ ತಾರಕದಲ್ಲಿ ಕೂಗಿಕೊಳ್ಳುತ್ತ ನಮ್ಮನ್ನು ರಕ್ಷಿಸಿ ಎಂದು ಅಂಗಲಾಚುತ್ತೇವೆ. ಭಾರತ ಸರ್ಕಾರ ನಿಮ್ಮನ್ನು ವಾಪಸ್ ಕರೆಸಿಕೊಳ್ಳಲು ಏನೆಲ್ಲ ಲಾಗಾ ಹಾಕಬೇಕು. ನಮ್ಮ ದೇಶದ ಮಾನ ಹರಾಜು ಮಾಡಲು ಎಲ್ಲರಿಗೂ ಉತ್ಸಾಹ. ಹಣಕ್ಕೆ ನಮ್ಮ ಪ್ರಜ್ಞೆಯನ್ನು ಅಡವಿಟ್ಟಿದ್ದೇವೆ.
                         ನನ್ನ ನೆಚ್ಚಿನ ಭಾರತೀಯರೇ, ನಾನು ಇಲ್ಲಿ ಬರೆದಿರುವುದು ಸ್ವಲ್ಪ ಖಾರ ಎನ್ನಿಸಬಹುದು ಆದರೆ ನಮ್ಮ ಅಂತರಂಗವನ್ನು ಶೋಧಿಸುವ ಕೆಲಸ ಮಾಡಬೇಕಾಗಿದೆ. ನಮ್ಮ ಪ್ರಜ್ಞೆಯೇ ನಮಗೆ ಮುಳ್ಳಾಗಿ ಚುಚ್ಚಬೇಕು. ಭಾರತಕ್ಕೆ ನಾವೇನು ಮಾಡಬೇಕು ಎನ್ನುವುದನ್ನು ನಾವೆಲ್ಲ ಕೂಡಿಯೇ ಯೋಚಿಸೋಣ. ನನ್ನ ಮಾತುಗಳು ಸರಿ ಎನ್ನಿಸಿದರೆ ಈ ಭಾಷಟನದ ಪ್ರತಿಯನ್ನು ಪ್ರತಿ ಭಾರತೀಯನಿಗೂ ರವಾನೆ ಮಾಡಿ. ಇ-ಮೇಲ್‌ನಲ್ಲಿ ಯಾವುದೋ ಕೆಟ್ಟ ಜೋಕು, ಕೆಲಸಕ್ಕೆ ಬಾರದ ಹರಟೆ ಕಳಿಸುವುದಕ್ಕೆ ಬದಲು.

ಸಂಗ್ರಹ : ಭವ್ಯ ಭಾರತದ ಕನಸುಗಾರ ಅಬ್ದುಲ್ ಕಲಾಂ
ಲೇಖಕ : ಟಿ.ಆರ್.ಅನಂತರಾಮು
ಪ್ರಕಾಶನ : ಸಪ್ನ ಬುಕ್ ಹೌಸ್, ಬೆಂಗಳೂರು
ಬೆಲೆ : ರೂ.೧೨೦


No comments:

Post a Comment